ADVERTISEMENT

ಶಿರಸಿ | ಘಮಘಮಿಸುವ ಲಡ್ಡು ಪ್ರಸಾದದ ಸಿದ್ಧತೆ

ಮಾರಿಕಾಂಬಾ ಜಾತ್ರೆಗೆ 3 ಲಕ್ಷ ಪ್ರಸಾದದ ಪೊಟ್ಟಣ ಗುರಿ

ರಾಜೇಂದ್ರ ಹೆಗಡೆ
Published 17 ಫೆಬ್ರುವರಿ 2026, 6:28 IST
Last Updated 17 ಫೆಬ್ರುವರಿ 2026, 6:28 IST
ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಪ್ರಯುಕ್ತ ಲಡ್ಡು ಪ್ರಸಾದ ತಯಾರಿಯಲ್ಲಿ ತೊಡಗಿರುವ ಬಾಣಸಿಗರು 
ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಪ್ರಯುಕ್ತ ಲಡ್ಡು ಪ್ರಸಾದ ತಯಾರಿಯಲ್ಲಿ ತೊಡಗಿರುವ ಬಾಣಸಿಗರು    

ಶಿರಸಿ: ದ್ವೈವಾರ್ಷಿಕವಾಗಿ ನಡೆಯುವ ಇಲ್ಲಿನ ಮಾರಿಕಾಂಬಾ ದೇವಿಯ ಅದ್ದೂರಿ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಬಣ್ಣದ ಮಠದ ಭೋಜನಾಲಯದಲ್ಲಿ ಈಗ ಬಾಣಸಿಗರು ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ಧಗಧಗನೆ ಉರಿಯುವ ಬೆಂಕಿಯ ಮುಂದೆ ಕುಳಿತು ಬಾಣಸಿಗರು ಹತ್ತಾರು ಬಂಡಿಗಳಲ್ಲಿ ಬೂಂದಿ ಕಾಳುಗಳನ್ನು ಕರಿಯುತ್ತಿದ್ದು, ರುಚಿಕರ ಲಡ್ಡುಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಬಾಣಸಿಗ ಗಣೇಶ ಹೆಗಡೆ ಹಾಗೂ ಸುಮಾರು 20ಕ್ಕೂ ಹೆಚ್ಚು ನುರಿತ ಬಾಣಸಿಗರು ಮೂರು ದಿನಗಳಿಂದ ಬೆಳಿಗ್ಗೆ 8.30ರಿಂದ ರಾತ್ರಿ 8.30ರವರೆಗೆ ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಬೃಹತ್ ಬಂಡಿಗಳಲ್ಲಿ ಬೂಂದಿ ಕಾಳುಗಳನ್ನು ಕರಿಯುತ್ತಾ, ಕೆಂಡದಂತಹ ಶಾಖದ ನಡುವೆಯೂ ಭಕ್ತಿಯಿಂದ ಪ್ರಸಾದ ತಯಾರಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಈಗಾಗಲೇ 30 ಕ್ವಿಂಟಲ್ ಕಡಲೆಹಿಟ್ಟು, 100 ಕ್ವಿಂಟಲ್ ಸಕ್ಕರೆ ಹಾಗೂ 165 ಡಬ್ಬಿ ಎಣ್ಣೆಗಳನ್ನು ಬಳಸಲಾಗುತ್ತಿದ್ದು, ದಾಸ್ತಾನು ಮುಗಿದಂತೆ ಮತ್ತೆ ಸಾಮಗ್ರಿಗಳನ್ನು ತರಿಸಿಕೊಳ್ಳಲು ಮಂಡಳಿ ನಿರ್ಧರಿಸಿದೆ. ಜತೆಗೆ, 3 ಲಕ್ಷ ಲಡ್ಡುಗಳನ್ನು ಈ ಜಾತ್ರೆಗೆ ಮಾಡಲು ದೇವಾಲಯ ಸಮಿತಿ ನಿರ್ಧರಿಸಿದೆ. 

‘ಕೇವಲ ಕೈಯಿಂದ ಉಂಡೆ ಕಟ್ಟುವುದಷ್ಟೇ ಅಲ್ಲದೆ, ಯಂತ್ರಗಳ ಸಹಾಯವನ್ನೂ ಪಡೆಯಲಾಗುತ್ತಿದೆ. ಕರಿದ ಬೂಂದಿ ಕಾಳಿಗೆ ಯಾಲಕ್ಕಿ, ಗೋಡಂಬಿ ಹಾಗೂ ದ್ರಾಕ್ಷಿಗಳನ್ನು ಹದವಾಗಿ ಬೆರೆಸಿ, ಯಂತ್ರದ ಮೂಲಕ ಪ್ರತಿ ಸೆಕೆಂಡಿಗೆ ಒಂದರಂತೆ ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಆಧುನಿಕ ಸ್ಪರ್ಶದಿಂದಾಗಿ ಭಕ್ತರ ಭಾರೀ ಬೇಡಿಕೆಯನ್ನು ಸಕಾಲದಲ್ಲಿ ಪೂರೈಸಲು ಸಾಧ್ಯವಾಗುತ್ತಿದೆ. ಕಳೆದ ಜಾತ್ರೆಯಲ್ಲಿ ಸುಮಾರು 2.5 ಲಕ್ಷ ಲಡ್ಡುಗಳು ಮಾರಾಟವಾಗಿದ್ದವು, ಆದರೆ ಈ ಬಾರಿ ಆ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ’ ಎಂಬುದು ದೇವಾಲಯದ ಆಡಳಿತ ಮಂಡಳಿಯ ಸುಧೀರ ಹಂದ್ರಾಳ ಮಾತಾಗಿದೆ. 

ADVERTISEMENT

ಬೆಲೆ ಏರಿಕೆಯ ನಡುವೆಯೂ ಗುಣಮಟ್ಟಕ್ಕೆ ಆದ್ಯತೆ ನೀಡಿರುವ ಧರ್ಮದರ್ಶಿ ಮಂಡಳಿಯು, ಎರಡು ಲಡ್ಡುಗಳಿರುವ ಪ್ರಸಾದದ ಪ್ಯಾಕೆಟ್‌ಗೆ ₹50 ದರ ನಿಗದಿಪಡಿಸಿದೆ. ಕಳೆದ ಜಾತ್ರೆ ಸಂದರ್ಭದಲ್ಲಿ ₹40 ಇದ್ದುದು, ಈ ಬಾರಿ ₹10 ಹೆಚ್ಚಳ ಮಾಡಲಾಗಿದೆ. ಭಕ್ತರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಎಷ್ಟು ಬೇಕಾದರೂ ಪ್ರಸಾದ ಖರೀದಿಸಲು ಮುಕ್ತ ಅವಕಾಶ ನೀಡಲಾಗಿದೆ’ ಎಂದು ಅವರು ತಿಳಿಸಿದರು. 

ಸಾಂಪ್ರದಾಯಿಕ ರುಚಿ ಕೆಡದಂತೆ ಆಧುನಿಕ ಯಂತ್ರಗಳನ್ನು ಬಳಸುತ್ತಿದ್ದೇವೆ. ಯಂತ್ರದ ನೆರವಿನಿಂದ ವೇಗವಾಗಿ ಲಡ್ಡು ತಯಾರಾಗುವುದರಿಂದ ಭಕ್ತರಿಗೆ ಪ್ರಸಾದದ ಕೊರತೆಯಾಗದಂತೆ ನಿರಂತರವಾಗಿ ಪೂರೈಕೆ ಮಾಡಬಹುದು
ಪ್ರಸಾದ ಹೆಗಡೆ ಲಡ್ಡು ತಯಾರಕ

ಆಹಾರ ಸುರಕ್ಷತಾ ಅಧಿಕಾರಿಗಳ ಭೇಟಿ

‘ಲಡ್ಡು ಮಾತ್ರವಲ್ಲದೆ ದೇವಸ್ಥಾನದ ಸಾಂಪ್ರದಾಯಿಕ ರವೆ ಪ್ರಸಾದವೂ ಸಿದ್ಧವಾಗುತ್ತಿದ್ದು ಶಿರಸಿಯಾದ್ಯಂತ ಈಗ ಜಾತ್ರೆಯ ಸಂಭ್ರಮದ ಜತೆಗೆ ಪ್ರಸಾದದ ಸವಿಯ ಘಮಲು ಹರಡಿದೆ. ಇದರ ಜತೆ ಆಹಾರ ಸುರಕ್ಷತಾ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪ್ರಸಾದದ ಶುಚಿತ್ವ ಮತ್ತು ಗುಣಮಟ್ಟವನ್ನು ಪರಿಶೀಲಿಸಿದ್ದು ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂಬುದು ದೇವಾಲಯ ಆಡಳಿತ ಪ್ರಮುಖರ ಮಾತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.