ಶಿರಸಿ: ‘ಕಲಾವಿದರಾಗಿ ಮಾತ್ರವಲ್ಲ ಕಲಾ ಪೋಷಕರಾಗಿಯೂ ಕಲೆಯನ್ನು, ಕಲಾವಿದರನ್ನು ಪೊರೆದವರು ವಿರಳ. ಅಂಥ ವಿರಳರಲ್ಲಿ ಚಂದುಬಾಬು ಅವರು ಮೊದಲು’ ಎಂದು ಹಿರಿಯ ಜೋತಿಷಿ ಹಂಡ್ರಮನೆ ಗೋಪಾಲಕೃಷ್ಣ ಭಟ್ ಹೇಳಿದರು.
ಅವರು ಭಾನುವಾರ ನಗರದ ಟಿಎಂಎಸ್ ಸಭಾಂಗಣದಲ್ಲಿ ಯಕ್ಷ ಸಂಭ್ರಮ ಟ್ರಸ್ಟ್ ಏರ್ಪಡಿಸಿದ ಐದು ದಿನಗಳ ಪ್ರಸಂಗ ಪಂಚಾಮೃತಮ್ ತಾಳಮದ್ದಲೆ ಸರಣಿಗೆ ಚಾಲನೆ ನೀಡಿ ಮಾತನಾಡಿದರು.
‘ಚಂದುಬಾಬು ಅವರು ಮಾತಿನಷ್ಟೇ ಕೃತಿಯಿಂದ ಕೂಡ ಜನಪ್ರಿಯರು. ಹಿರಿಯರ ನೆನಪಿನಲ್ಲಿ ಹಳೆ ಬೇರು ಹೊಸ ಚಿಗುರಿನ ತಾಳಮದ್ದಳೆ ನಡೆಸುವುದು ಅಂತ್ಯಂತ ಶ್ರೇಷ್ಠ ಕಾರ್ಯ’ ಎಂದರು.
ಟ್ರಸ್ಟ್ ಮುಖ್ಯಸ್ಥ ಸೀತಾರಾಮ ಚಂದು ಮಾತನಾಡಿ, ‘11 ವರ್ಷದಿಂದ ಸರಣಿ ತಾಳಮದ್ದಲೆ ಹಾಗೂ ಚಂದುಬಾಬು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಐದು ದಿನ ಪ್ರಸಂಗ ಪಂಚಾಮೃತಮ್ ತಾಳಮದ್ದಲೆಯಲ್ಲಿ ಮೂವತ್ತಕ್ಕೂ ಅಧಿಕ ಹಿರಿಯ ಹಾಗೂ ಕಿರಿಯ ಕಲಾವಿದರು ಭಾಗವಹಿಸಲಿದ್ದಾರೆ. ಅ.7ರ ತಾಳಮದ್ದಲೆ ಮಧ್ಯೆ ಹಿರಿಯ ಅರ್ಥಧಾರಿ ಸುಬ್ರಾಯ ಕೆರೆಕೊಪ್ಪ ಅವರಿಗೆ ದಿ. ಚಂದುಬಾಬು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ನ ಇಂದಿರಾ ಹೆಗಡೆ, ಬಾಲಚಂದ್ರ ಕೆಶಿನ್ಮನೆ, ಅನಂತ ದಂತಳಿಕೆ, ಡಾ.ವಿಕಾಸರಾವ್ ಇತರರು ಇದ್ದರು. ಬಳಿಕ ವೀರ ವಾನರ ಪ್ರಸಂಗ ಪ್ರದರ್ಶನವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.