ಶಿರಸಿ: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವತಿಯಿಂದ ನಡೆಯುತ್ತಿರುವ ಭಾರತ್ ಯಾತ್ರೆ ಬೆಂಬಲಿಸಿ ಸೆ.23ರಂದು ನಗರದಲ್ಲಿ ಸಮಾವೇಶ ಸಂಘಟಿಸಲಾಗಿದೆ’ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉತ್ತರ ಕನ್ನಡ ಜಿಲ್ಲಾ ಘಕಟದ ಅಧ್ಯಕ್ಷ ನಾರಾಯಣ ನಾಯಕ ತಿಳಿಸಿದರು.
ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾತ್ರೆಯು ಸೆ.5ರಂದು ಆರಂಭಗೊಂಡಿದ್ದು, ಸೆ.23ರವರೆಗೆ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಮುಂಡಗೋಡ ತಾಲ್ಲೂಕಿನ ಮೂಲಕ ಜಿಲ್ಲೆಯನ್ನು ಪ್ರವೇಶ ಮಾಡಲಿದೆ. ನಂತರ ಶಿರಸಿಗೆ ಬರಲಿದ್ದು, ನಗರದ ಮಾರಿಕಾಂಬಾ ಕಾಲೇಜಿನ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದರು.
‘ಈ ವೇಳೆ ಎನ್.ಪಿ.ಎಸ್ ರದ್ದುಗೊಳಿಸಿ, ಒಪಿಎಸ್ ಮರು ಜಾರಿಗೊಳಿಸಬೇಕು. ಗುತ್ತಿಗೆ ಆಧಾರಿತ ಶಿಕ್ಷಕರ ಬದಲಾಗಿ ಕಾಯಂ ಶಿಕ್ಷಕರನ್ನು ನೇಮಕಗೊಳಿಸಬೇಕು. ಎನ್.ಇ.ಪಿ 2020ರಲ್ಲಿ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಹಾನಿಕಾರಕ ಪ್ರಸ್ತಾಪಗಳನ್ನು ಕೈ ಬಿಡಬೇಕು. ರಾಷ್ಟ್ರದಾದ್ಯಂತ ಶಿಕ್ಷಕರಿಗೆ ಏಕರೂಪದ ವೇತನ ಜಾರಿಗೊಳಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು.
ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ಪೂಜಾರ ಮಾತನಾಡಿ, ಹೊಸ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಮರಣ ಶಾಸನ. ರಾಜ್ಯ ಮತ್ತು ಕೇಂದ್ರ ಸರ್ಕಾರ ಎನ್.ಪಿ.ಎಸ್ ಕೈಬಿಟ್ಟು ಒ.ಪಿ.ಎಸ್ ಜಾರಿಗೊಳಿಸಿ, ನೌಕರರ ಹಿತ ಕಾಪಾಡಬೇಕು’ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಪಟಗಾರ, ಪದಾಧಿಕಾರಿಗಳಾದ ಜುಜೆ ಫರ್ನಾಂಡೀಸ್, ಉದಯ ಭಟ್, ಬಾಲಚಂದ್ರ ಪಟಗಾರ ಇನ್ನಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.