ಶಿರಸಿ: ತಾಲ್ಲೂಕಿನ ಶಿರಸಿ–ಗೋಳಿಮಕ್ಕಿ ಮಾರ್ಗದ ಕೊಳಗಿಬೀಸ್ನಿಂದ ಹಾಣಜಿಮನೆ ಮಾರ್ಗದ ಮಧ್ಯೆ ರಸ್ತೆ ಹೊಂಡ ಗುಂಡಿಗಳಿಂದ ತುಂಬಿದ್ದು, ಹೈರಾಣಾದ ಗ್ರಾಮಸ್ಥರು ಶ್ರಮದಾನದ ಮೂಲಕ ಹೊಂಡ ತುಂಬಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕೆಲ ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಈ ಮಾರ್ಗದ ಹಣಜಿಮನೆಯಿಂದ ತಟ್ಟಿಕೈವರೆಗೆ ಉತ್ತಮ ರಸ್ತೆ ನಿರ್ಮಿಸಲಾಗಿದೆ. ಆದರೆ, ಹಾಣಜಿಮನೆಯಿಂದ ಕೊಳಗಿಬೀಸ್ವರೆಗೆ 1.5 ಕಿ.ಮೀಗಳಷ್ಟು ರಸ್ತೆ ಮರು ಡಾಂಬರೀಕರಣವಾಗಿರಲಿಲ್ಲ. ಮಳೆಗಾಲದಲ್ಲಿ ಇಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರಿಗೆ ತೊಂದರೆಯಾಗಿತ್ತು. ಬೈಕ್ ಸವಾರರಂತೂ ಹೊಂಡ ತಪ್ಪಿಸುವಲ್ಲಿ ಹೈರಾಣಾಗುತ್ತಿದ್ದರಲ್ಲದೇ ಬಿದ್ದು ಗಾಯ ಮಾಡಿಕೊಂಡ ಘಟನೆಗಳೂ ನಡೆದಿದ್ದವು.
‘ಶಿರಸಿ ಗೋಳಿಮಕ್ಕಿಗೆ ಸಾರಿಗೆ ಸಂಸ್ಥೆಯ ಶಿಥಿಲಾವಸ್ಥೆಯಲ್ಲಿರುವ ಬಸ್ಗಳನ್ನು ಬಿಡಲಾಗುತ್ತಿದೆ. ಈ ಬಸ್ಗಳು ಹಾಣಜಿಮನೆಯಿಂದ ಕೊಳಗಿಬೀಸ್ ತಲುಪುವಷ್ಟರಲ್ಲಿ ಹಾಳಾಗಿ ನಿಲ್ಲುವುದೇ ಜಾಸ್ತಿ ಆಗಿತ್ತು. ಶಾಲಾ– ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪಲೂ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿದ ಗ್ರಾಮಸ್ಥರೆಲ್ಲ ಸೇರಿ ಈ ರಸ್ತೆ ಹೊಂಡ ತುಂಬಲು ನಿರ್ಧರಿಸಿದ್ದಾರೆ. ಇಲ್ಲಿಯ ಹಾಣಜಿಮನೆ, ಅಬ್ಬಿಹದ್ದ, ಹೆಬ್ಬಲಸು, ಪಟ್ಟಿಗುಂಡಿ, ನೇರ್ಲದ್ದ, ಮತ್ತಿಗಾರ, ಓಣಿಮನೆ, ನೇರ್ಲವಳ್ಳಿ ಗ್ರಾಮಸ್ಥರೆಲ್ಲ ಸ್ವತಃ ಗುದ್ದಲಿ, ಪಿಕಾಸು ಹಿಡಿದು ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯ ನೂರಾರು ಹೊಂಡಗಳನ್ನು ತುಂಬಿದ್ದಾರೆ.
ವಾಹನ ಸಂಚಾರ ಈಗ ಸುಗಮವಾಗಿ ನಡೆಯುವಂತೆ ಮಾಡಿದ್ದಾರೆ’ ಎಂದು ಸ್ಥಳೀಯರಾದ ಮಂಜುನಾಥ ಹೆಗಡೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.