ADVERTISEMENT

ಉತ್ತರ ಕನ್ನಡ: ಹೈಟೆಕ್ ಆಸ್ಪತ್ರೆಗೆ ಆನ್‌ಲೈನ್ ಅಭಿಯಾನ

‘ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕೇ ಬೇಕು’: ಆಂದೋಲನಕ್ಕೆ ಸಮಾನ ಮನಸ್ಕರಿಂದ ಚಾಲನೆ

ಸದಾಶಿವ ಎಂ.ಎಸ್‌.
Published 7 ಜೂನ್ 2019, 19:49 IST
Last Updated 7 ಜೂನ್ 2019, 19:49 IST
ಹೈಟೆಕ್ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿರುವ ಅಭಿಯಾನದ ಪುಟ
ಹೈಟೆಕ್ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿರುವ ಅಭಿಯಾನದ ಪುಟ   

ಕಾರವಾರ: ಜಿಲ್ಲೆಯ ಕರಾವಳಿ, ಮಲೆನಾಡಿನ ಗಡಿಭಾಗದಲ್ಲಿಅಪಘಾತವಾದರೆ ಅಥವಾಇನ್ಯಾವುದೇ ರೀತಿಯಲ್ಲಿ ಜೀವಕ್ಕೆ ಹಾನಿಯಾಗುವ ಆತಂಕವಿದ್ದರೆಸೂಕ್ತ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆಯಿಲ್ಲ. ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಮಂಗಳೂರು, ಮಣಿಪಾಲ ಅಥವಾ ಗೋವಾಕ್ಕೆ ಹೋಗಬೇಕಾಗಿದೆ. ಇದರಿಂದ ಆಕ್ರೋಶಗೊಂಡಿರುವ ಯುವಕರು ಹೈಟೆಕ್ ಆಸ್ಪತ್ರೆಗಾಗಿ ‘ಆನ್‌ಲೈನ್ ಅಭಿಯಾನ’ ಆರಂಭಿಸಿದ್ದಾರೆ.

#WeNeedEmergencyHospitalInUK ಎಂಬ ಹ್ಯಾಷ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆ ಮಂಡಿಸುತ್ತಿದ್ದಾರೆ. ತಮ್ಮ ಬರಹಗಳನ್ನುಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಅನಂತಕುಮಾರ ಹೆಗಡೆ, ಜಿಲ್ಲಾಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಮ, ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ‘ಟ್ಯಾಗ್’ ಮಾಡುತ್ತಿದ್ದಾರೆ.

‘ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕೇ ಬೇಕು’ ಎಂಬ ಈ ಅಭಿಯಾನವನ್ನು ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಗ್ರೂಪ್‌ಗಳು ನಿಭಾಯಿಸುತ್ತಿವೆ. ಅವುಗಳಲ್ಲಿ ‘ಯುಕೆ ಎಕ್ಸ್‌ಪ್ರೆಸ್’, ‘ನಮ್ಮ ಯುಕೆ’, ‘ಉತ್ತರ ಕನ್ನಡ ಟ್ರೋಲರ್ಸ್’, ‘ನಮ್ಮ ಉತ್ತರ ಕನ್ನಡ ಮೀಮ್ಸ್’, ‘ಬಾಡ ನ್ಯೂಸ್’ ಮುಂತಾದವು ಪ್ರಮುಖವಾಗಿವೆ.ಹೈಟೆಕ್ ಆಸ್ಪತ್ರೆಗೆಹಕ್ಕೊತ್ತಾಯ ಮಾಡುವ ಸಲುವಾಗಿಯೇ ವಾಟ್ಸ್‌ಆ್ಯಪ್ ಗ್ರೂಪ್‌ ಕೂಡ ರಚನೆಯಾಗಿದ್ದು, ನೂರಾರು ಸಮಾನ ಮನಸ್ಕರು ಸೇರಿಕೊಂಡಿದ್ದಾರೆ.

ADVERTISEMENT

‘ಹಲವು ವರ್ಷಗಳಿಂದಈ ಬೇಡಿಕೆ ಸಲ್ಲಿಸುತ್ತಿದ್ದೇವೆ. ಆದರೆ, ಸಂಸದರು, ಸಚಿವರು, ಶಾಸಕರಾಗಲೀ ಗಟ್ಟಿಯಾಗಿ ಧ್ವನಿಯೆತ್ತಿ ಬೇಡಿಕೆ ಈಡೇರಿಸುವ ಕಾರ್ಯ ಮಾಡಲಿಲ್ಲ. ಹಾಗಾಗಿ ಯುವಕರ ಬಳಗ ಒಟ್ಟಾಗಿ ಆನ್‌ಲೈನ್ಅಭಿಯಾನ ಆರಂಭಿಸಿದೆ ಎನ್ನುತ್ತಾರೆ ಕುಮಟಾದ ‘ಬಾಡ ನ್ಯೂಸ್‌’ ‍ಫೇಸ್‌ಬುಕ್ ಪೇಜ್‌ನ ಅಡ್ಮಿನ್ ವಸಂತ ನಾಯ್ಕ.

ಶಾಸಕ ಸುನೀಲ್ ನಾಯ್ಕ ಪತ್ರ:ಈ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಭಟ್ಕಳ ಶಾಸಕ ಸುನೀಲ ನಾಯ್ಕ, ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಮ ಅವರಿಗೆ ಪತ್ರ ಬರೆದಿದ್ದಾರೆ. ಜನರ ಪ್ರಾಣ ಉಳಿಸಲುಜಿಲ್ಲೆಯ ಮಧ್ಯಭಾಗವಾದ ಕುಮಟಾ ಅಥವಾ ಹೊನ್ನಾವರದಲ್ಲಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಶುರುವಾಗದ ಟ್ರಾಮಾ ಸೆಂಟರ್:ಕಾರವಾರದ ವೈದ್ಯಕೀಯ ಕಾಲೇಜಿನ ಬಳಿ ಟ್ರಾಮಾ ಸೆಂಟರ್ ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪಸ್ತಾವ ಸಲ್ಲಿಕೆಯಾಗಿದೆ.ಇದಕ್ಕಾಗಿಜಾಗ ಪರಿಶೀಲನೆಯೂ ನಡೆದಿದೆ. ಆದರೆ, ಈವರೆಗೂ ಕೇಂದ್ರ ಸರ್ಕಾರದಿಂದ ಪರವಾನಗಿ ದೊರೆತಿಲ್ಲ ಎನ್ನುತ್ತಾರೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಶಿವಾನಂದ ದೊಡ್ಡಮನಿ.

‘ಟ್ರಾಮಾ ಸೆಂಟರ್‌ಗೆ ಕೇಂದ್ರದಿಂದ ಅನುಮತಿ ಮತ್ತೂವಿಳಂಬವಾದರೆ ರಾಜ್ಯ ಸರ್ಕಾರದಿಂದ ನಿರ್ಮಿಸಲಾಗುತ್ತಿರುವ ನೂತನ ಆಸ್ಪತ್ರೆಯಲ್ಲಿ ಒಂದು ವಿಭಾಗವನ್ನು ಮೀಸಲಿಡಲಾಗುವುದು. ಇಲ್ಲಿ ತುರ್ತು ನಿಗಾ ಘಟಕ, ಆಪರೇಷನ್ ಥಿಯೇಟರ್‌ಗಳ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವೆಂಟಿಲೇಟೆಡ್ ಆಂಬುಲೆನ್ಸ್ ಕೇವಲ ಎರಡಿದ್ದು, ಇವು ಖಾಸಗಿ ಸಂಸ್ಥೆಗಳಿಗೆ ಸೇರಿವೆ ಎಂಬುದೂ ಗಮನಾರ್ಹವಾಗಿದೆ.

239 ಮಂದಿ ಸಾವು!:2018ರ ಮೇ ತಿಂಗಳಿನಿಂದ 2019ರ ಏಪ್ರಿಲ್‌ವರೆಗೆ ಜಿಲ್ಲೆಯ ವಿವಿಧೆಡೆ 1,103 ಅಪಘಾತಗಳಾಗಿವೆ. ಇವುಗಳಲ್ಲಿಪೈಕಿ 239 ಮಂದಿ ಮೃತಪಟ್ಟಿದ್ದಾರೆ. 522 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 1,331 ಮಂದಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎನ್ನುತ್ತವೆ ಪೊಲೀಸ್ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.