ADVERTISEMENT

ಪ್ರತಿ ಹಿಂದೂಗಳ ಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಿ: ಪ್ರಮೋದ ಮುತಾಲಿಕ್ ಹೇಳಿಕೆ

ಶ್ರೀರಾಮಸೇನೆ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 18:38 IST
Last Updated 14 ಆಗಸ್ಟ್ 2022, 18:38 IST
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್   

ಶಿರಸಿ: 'ಹಿಂದೂ ಸಂಘಟನೆಗಳು ಒಗ್ಗಟ್ಟಾಗಿ ಹೋಗಬೇಕು. ಬಿಜೆಪಿ ನಂಬಿ ಕೂತರೆ ಪ್ರಯೋಜನವಿಲ್ಲ. ಕಠಿಣ ಕ್ರಮ ಎಂಬ ಸರ್ಕಾರದ ಬೊಗಳೆ ನಂಬಲು ಜನರು ತಯಾರಿಲ್ಲ. ಸಾಥ್ ಕೊಟ್ಟರೆ ಕೊಡಿ, ಇಲ್ಲ ಒದ್ದು ಮುನ್ನಡೆಯುತ್ತೇವೆ' ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲೆಸೆದರು.

ಇಲ್ಲಿನ ಅಂಜನಾದ್ರಿ ದೇವಸ್ಥಾನದಲ್ಲಿ ಭಾನುವಾರ ಜಾಗೃತ ನಾಗರಿಕರ ವೇದಿಕೆ ಮತ್ತು ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಹಿಂದೂಗಳು ತಮ್ಮ ರಕ್ಷಣೆಗೆ ಮನೆಯಲ್ಲಿ‌ ತಲವಾರ್ ಇಟ್ಟುಕೊಳ್ಳಬೇಕು. ಕ್ಷತ್ರೀಯ ಗುಣ ಬೆಳೆಸಿಕೊಳ್ಳಬೇಕು' ಎಂದರು.

ADVERTISEMENT

'ದೇಶಕ್ಕೆ ಸ್ವಾತಂತ್ರ್ಯ ಬಂದರೂ ಹಿಂದೂ ಸಮಾಜಕ್ಕಾಗಿ ಹೋರಾಡುವ ನನ್ನಂತಹ ವ್ಯಕ್ತಿಗೆ ರಾಜ್ಯದ 21 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ನೆರೆಯ ಗೋವಾಕ್ಕೆ ವಿದೇಶಿಗರು ಬರುತ್ತಾರೆ. ಎಂಟು ವರ್ಷದಿಂದ ನನಗೆ ಪ್ರವೇಶ ನೀಡುತ್ತಿಲ್ಲ' ಎಂದರು.

'ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ರಾಷ್ಟ್ರ, ದೇಶ ವಿಭಜನೆಯ ಕರಾಳತೆಯನ್ನೂ ನೆನಪಿಸಿಕೊಳ್ಳಬೇಕು. ಅಖಂಡ ಭಾರತದ ಸಿಂಧೂ ನದಿ ಭಾಗದ ಜನರು ಅನಾಥವಾದ ದಿನ ಇದಾಗಿತ್ತು' ಎಂದರು.

'ಕೇಸರಿ ಬಣ್ಣದ ಧ್ವಜವನ್ನು ರಾಷ್ಟ್ರಧ್ವಜ ಎಂದು ಸಮಿತಿ ಪರಿಗಣಿಸಿತ್ತು‌. ಮಹಾತ್ಮ ಅದನ್ನು ವಿರೋಧಿಸಿದ ಕಾರಣ ತ್ರಿವರ್ಣ ಧ್ವಜ ಜಾರಿಗೆ ಬಂದಿತು. ಕೇಸರಿ ಆಗಿನ ಗಾಂಧೀಜಿಯವರಿಂದ ಹಿಡಿದು ಈಗಿನ ಸಿದ್ದರಾಮಯ್ಯವರೆಗೆ ಅಪಥ್ಯ ಆಗಿದೆ' ಎಂದು ಟೀಕಿಸಿದರು.

'ಕಾಂಗ್ರೆಸ್ ನಾಯಕರು ತುಷ್ಟೀಕರಣದ ಸಲುವಾಗಿ ದೇಶದ್ರೋಹಿಗಳಿಗೂ ದೇಶಭಕ್ತರ ಪಟ್ಟ ಕಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಟಿಪ್ಪುನಂತಹ ಹಿಂದೂ ವಿರೋಧಿಯನ್ನು ಕಾಂಗ್ರೆಸ್ ನಾಯಕರು ಮೆರೆಸಿದ್ದಾರೆ' ಎಂದರು.

ವೀರ ಸಾವರ್ಕರ್ ಬಗ್ಗೆ ಅರಿಯದ ಮುಸ್ಲಿಂ ಗೂಂಡಾಗಳು ಅವಾರನ್ನು ಅವಮಾನಿಸಿದ್ದಾರೆ. ಅಂತಹವರನ್ನು ಹುಡುಕಿ ಗುಂಡೇಟು ಹಾಕಬೇಕು' ಎಂದರು.

ಅಂಜನಾದ್ರಿ ದೇವಸ್ಥಾನದ ಅಧ್ಯಕ್ಷ ಕಿರಣ ಚಿತ್ರಗಾರ, ನಿವೃತ್ತ ಸೈನಿಕ ಸುಭೇದಾರ್ ಇ.ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.