ಕಾರವಾರ: ಜಿಲ್ಲೆಯಲ್ಲಿ ಸೋಮವಾರ ಇಡೀ ದಿನ ಮಳೆಯ ಅಬ್ಬರ ಜೋರಾಗಿತ್ತು. ಕುಮಟಾ ಹಾಗೂ ಹೊನ್ನಾವರ ತಾಲ್ಲೂಕುಗಳಲ್ಲಿ ಸಾಕಷ್ಟು ತೊಂದರೆಯನ್ನೂ ತಂದಿಟ್ಟಿತು.
ಕುಮಟಾ ತಾಲ್ಲೂಕಿನ ಅಳಕೋಡ ಗ್ರಾಮ ಪಂಚಾಯ್ತಿಯ ಕತಗಾಲ ಬಳಿ ಚಂಡಿಕಾ ಹೊಳೆ ಮತ್ತೊಮ್ಮೆ ಉಕ್ಕಿ ಹರಿಯಿತು. ಇದರಿಂದ ಕುಮಟಾ– ಶಿರಸಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಮೂರು ಅಡಿ ನೀರು ಹರಿಯಿತು. ಇದರಿಂದ ಎರಡು ಗಂಟೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದೇ ತಾಲ್ಲೂಕಿನ ಭಂಡಿವಾಳ ರಸ್ತೆ ಸಂಪೂರ್ಣವಾಗಿ ಕುಸಿದು ಗ್ರಾಮಗಳ ನಡುವೆ ಸಂಚಾರಕ್ಕೆ ಅಡಚಣೆಯಾಗಿದೆ.
ತಾಲ್ಲೂಕಿನ ಬಡಗಣಿ ಹೊಳೆಯೂ ಉಕ್ಕಿ ಹರಿಯುತ್ತಿದ್ದು, ಇಕ್ಕೆಲಗಳಲ್ಲಿ ಸುಮಾರು 50 ಮನೆಗಳು ಜಲಾವೃತವಾಗಿವೆ. ಹೊನ್ನಾವರ ತಾಲ್ಲೂಕಿನ ಗುಂಡಬಾಳಾ ನದಿ, ಭಾಸ್ಕೇರಿ ಹಳ್ಳದಲ್ಲಿ ನೆರೆ ಬಂದಿದ್ದು 12 ಗ್ರಾಮಗಳಿಗೆ ನೆರೆ ನೀರು ನುಗ್ಗಿದೆ. ಈ ಪ್ರದೇಶಗಳಲ್ಲಿ ಒಂಬತ್ತು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 555 ಮಂದಿ ಆಶ್ರಯ ಪಡೆದಿದ್ದಾರೆ.
ಶಿರಸಿಯಲ್ಲಿ ಭಾರಿ ಮಳೆಗೆ ಎರಡು ಮನೆಗಳಿಗೆ, ತಾಲ್ಲೂಕಿನ ಆಡಳ್ಳಿಯಲ್ಲಿ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಬನವಾಸಿ ಹೋಬಳಿಯ ಮಧುರವಳ್ಳಿ ಗ್ರಾಮದ ಕೆರೆಯ ಏರಿ ಒಡೆದಿದೆ.
ಉಳಿದಂತೆ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಕಾರವಾರ, ಭಟ್ಕಳ ತಾಲ್ಲೂಕಿನಲ್ಲಿ ದಿನವಿಡೀ ಮಳೆಯಾಯಿತು. ಭಾನುವಾರ ಬೆಳಿಗ್ಗೆ 8ರಿಂದ ಸೋಮವಾರ ಬೆಳಿಗ್ಗೆ 8ರ ಅವಧಿಯಲ್ಲಿ ಭಟ್ಕಳದಲ್ಲಿ 20.2 ಸೆಂ.ಮೀ, ಹೊನ್ನಾವರದಲ್ಲಿ 15.5 ಸೆಂ.ಮೀ, ಕುಮಟಾದಲ್ಲಿ 13.7 ಸೆಂ.ಮೀ ಮಳೆಯಾಗಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.