ADVERTISEMENT

ಹಕ್ಕು ಪ್ರತಿಪಾದಿಸಿದ ಮಕ್ಕಳು

ಜಿಲ್ಲಾ ಮಟ್ಟದ ಮಕ್ಕಳ ಸಂಸತ್‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 12:05 IST
Last Updated 7 ಡಿಸೆಂಬರ್ 2019, 12:05 IST
ಶಿರಸಿಯಲ್ಲಿ ನಡೆದ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಬಿಇಒ ಸದಾನಂದ ಸ್ವಾಮಿ ಮಾತನಾಡಿದರು
ಶಿರಸಿಯಲ್ಲಿ ನಡೆದ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಬಿಇಒ ಸದಾನಂದ ಸ್ವಾಮಿ ಮಾತನಾಡಿದರು   

ಶಿರಸಿ: ಮಕ್ಕಳ ಸಮಸ್ಯೆಗಳನ್ನು ಮಕ್ಕಳೇ ಮುಂದಾಗಿ ಶಾಸನಸಭೆಯೆದುರು ತೆರೆದಿಡಲು ಅವಕಾಶ ಕಲ್ಪಿಸುವ ಮಕ್ಕಳ ಹಕ್ಕುಗಳ ಸಂಸತ್ ಶನಿವಾರ ಇಲ್ಲಿ ನಡೆಯಿತು.

ಸ್ಕೊಡ್‌ವೆಸ್ ಸಂಸ್ಥೆ ಆಶ್ರಯದಲ್ಲಿ ಶಾಸಕರ ಮಾದರಿ ಶಾಲೆ ನಂ.2ರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ 50 ಶಾಲೆಗಳ 100 ಮಕ್ಕಳು ಭಾಗವಹಿಸಿದ್ದರು. ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಹಕ್ಕುಗಳ ಉಲ್ಲಂಘನೆ, ಮಕ್ಕಳ ಹಕ್ಕುಗಳ ಅನುಷ್ಠಾನದಲ್ಲಿರುವ ತೊಡಕುಗಳ ಬಗ್ಗೆ ವಿದ್ಯಾರ್ಥಿಗಳು ನಿರರ್ಗಳವಾಗಿ ಮಾತನಾಡಿದರು. ಸರ್ಕಾರದ ಎಲ್ಲ ಇಲಾಖೆಗಳು ಒಂದಾಗಿ, ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಬಿಇಒ ಸದಾನಂದ ಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶೈಕ್ಷಣಿಕ, ಸಾಮಾಜಿಕ, ಕೌಟುಂಬಿಕ ವ್ಯವಸ್ಥೆಯಲ್ಲಿ ಮಕ್ಕಳ ಹಕ್ಕು ಮೊಟಕಾಗುವ ಸಾಧ್ಯತೆಗಳಿವೆ. ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಇದು ಅವರ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪಾಲಕರು ಮಕ್ಕಳಿಗೆ ಸೌಲಭ್ಯ ಕಲ್ಪಿಸುವ ಜೊತೆಗೆ, ಪ್ರೀತಿಯನ್ನು ನೀಡಬೇಕು. ಮಕ್ಕಳ ಕಡೆಗೆ ಹೆಚ್ಚು ಗಮನಕೊಡಬೇಕು ಎಂದು ಸಲಹೆ ಮಾಡಿದರು.

ADVERTISEMENT

ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಡಾ.ವೆಂಕಟೇಶ ನಾಯ್ಕ ಮಾತನಾಡಿ,‘ಮಕ್ಕಳ ಭಿಕ್ಷಾಟನೆ ಇಂದಿಗೂ ನಿಂತಿಲ್ಲ. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಕ್ಕಳಲ್ಲಿ ಹಕ್ಕಿನ ಅರಿವು ಮೂಡಿದಾಗ ಇವುಗಳನ್ನು ನಿಯಂತ್ರಿಸಲು ಸಾಧ್ಯ’ ಎಂದು. ಮಕ್ಕಳ ಹಕ್ಕು ಸಮಿತಿ ಪ್ರಮುಖರಾದ ಅನಿತಾ ಪರ್ವತಿಕರ್, ಅಂಜನಾ ಭಟ್ಟ, ಶಿವರಾಯ ದೇಸಾಯಿ, ಕವಿತಾ ನಾಯ್ಕ, ಬಿ.ಶ್ರೀಪಾದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದತ್ತಾತ್ರೇಯ ಭಟ್ಟ ಇದ್ದರು. ರಿಯಾಜ್ ಸಾಗರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.