ADVERTISEMENT

ಕಾರವಾರ | ಅನಾಥ ಸ್ಥಿತಿಯಲ್ಲಿ ಟ್ಯಾಗೋರ್ ಕಡಲತೀರ

ನಿರ್ವಹಣೆ ವಿಚಾರ:ನಗರಸಭೆ, ಪ್ರವಾಸಿ ತಾಣಗಳ ನಿರ್ವಹಣಾ ಸಮಿತಿ ನಡುವೆ ತಿಕ್ಕಾಟ

ಗಣಪತಿ ಹೆಗಡೆ
Published 18 ಜನವರಿ 2025, 5:39 IST
Last Updated 18 ಜನವರಿ 2025, 5:39 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಕಸಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಕಸಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು   

ಕಾರವಾರ: ‘ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು’ ಎಂಬ ಗಾದೆಯಂತಾಗಿದೆ ಇಲ್ಲಿನ ಟ್ಯಾಗೋರ್ ಕಡಲತೀರದ ಸ್ಥಿತಿ! ಕಡಲತೀರದ ನಿರ್ವಹಣೆಯ ವಿಚಾರದಲ್ಲಿ ನಗರಸಭೆ ಮತ್ತು ಜಿಲ್ಲಾ ಪ್ರವಾಸಿ ತಾಣಗಳ ನಿರ್ವಹಣಾ ಸಮಿತಿಯ ನಡುವಿನ ಹಗ್ಗಜಗ್ಗಾಟದಿಂದ ಕಡಲತೀರ ಸ್ವಚ್ಛತೆ ಕಾಣದೆ ಗಬ್ಬುನಾರುತ್ತಿದೆ.

ಟ್ಯಾಗೋರ್ ಕಡಲತೀರದಲ್ಲಿ ಉದ್ಯಾನ, ಮಯೂರವರ್ಮ ವೇದಿಕೆ, ಸಾರ್ವಜನಿಕ ಶೌಚಾಲಯ ಸೇರಿದಂತೆ ಹಲವು ಸೌಕರ್ಯಗಳನ್ನು ನಗರಸಭೆ ನಿರ್ಮಿಸಿತ್ತು. ಸುಮಾರು ಏಳು ವರ್ಷಗಳ ಹಿಂದೆ ಕಡಲತೀರವನ್ನು ಜಿಲ್ಲಾ ಪ್ರವಾಸಿ ತಾಣಗಳ ನಿರ್ವಹಣಾ ಸಮಿತಿಯು ತನ್ನ ಸುಪರ್ದಿಗೆ ಪಡೆದುಕೊಂಡಿತು. ಆ ಬಳಿಕ ಸಮಿತಿಯು ಫುಡ್ ಪಾರ್ಕ್ ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸಿದೆ.

ನಿರ್ವಹಣಾ ಸಮಿತಿಯು ಐದು ವರ್ಷಗಳ ಕಾಲ ಕಡಲತೀರವನ್ನು ನಿರ್ವಹಣೆ ಮಾಡಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಸ್ವಚ್ಛತೆ ಕಾರ್ಯವನ್ನು ನಗರಸಭೆಗೆ ವಹಿಸಲಾಗಿತ್ತು. ಪ್ರವಾಸಿ ತಾಣವಾಗಿರುವ ಕಡಲತೀರಕ್ಕೆ ನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. ಇಲ್ಲಿ ಹೇರಳ ಪ್ರಮಾಣದಲ್ಲಿ ಕಸ ಸಂಗ್ರಹವೂ ಆಗುತ್ತಿದೆ.

ADVERTISEMENT

‘ಕಡಲತೀರದಲ್ಲಿನ ಸೌಕರ್ಯಗಳನ್ನು ನಿರ್ವಹಿಸುತ್ತಿರುವ ಪ್ರವಾಸಿ ತಾಣಗಳ ನಿರ್ವಹಣಾ ಸಮಿತಿಯು ಸ್ವಚ್ಛತೆ ಕಾರ್ಯವನ್ನೂ ತಾನೇ ನಡೆಸಿಕೊಳ್ಳಬೇಕು. ಇಲ್ಲವೇ ಇದಕ್ಕಾಗಿ ಶುಲ್ಕ ಪಾವತಿಸಬೇಕು’ ಎಂಬುದು ನಗರಸಭೆಯ ವಾದ. ‘ಸ್ವಚ್ಛತೆ ಕಾಪಿಟ್ಟುಕೊಳ್ಳವುದು ನಗರಸಭೆಯ ಜವಾಬ್ದಾರಿ. ಕಡಲತೀರವು ನಗರಸಭೆ ವ್ಯಾಪ್ತಿಯಲ್ಲಿರುವ ಕಾರಣಕ್ಕೆ ಅವರೇ ಸ್ವಚ್ಛತೆ ಕೆಲಸ ನಿಭಾಯಿಸಬೇಕು’ ಎಂಬುದು ಸಮಿತಿಯ ವಾದ.

‘ಕಡಲತೀರದಲ್ಲಿ ಕಸದ ರಾಶಿಯೇ ಕಾಣಿಸುತ್ತಿದೆ. ವಾಯುವಿಹಾರಕ್ಕೆ ಬಂದವರು, ಕಡಲತೀರ ನೋಡಲು ಬರುವ ಪ್ರವಾಸಿಗರು ಇಲ್ಲಿನ ಸ್ಥಿತಿಗೆ ಮರಗುತ್ತಿದ್ದಾರೆ. ಇಷ್ಟು ದಿನ ಕಡಲತೀರದ ಸೌಂದರ್ಯಕ್ಕೆ ಮುರಿದ ಶೆಲ್ಟರ್, ಅಡ್ಡಾದಿಟ್ಟಿಯಾಗಿ ಬಿದ್ದಿರುವ ಸಿಮೆಂಟ್ ಬೆಂಚುಗಳು ಅಡ್ಡಿಯಾಗಿದ್ದವು. ಈಗ ತೀರದುದ್ದಕ್ಕೂ ಚೆಲ್ಲಾಪಿಲ್ಲಿಯಾಗಿರುವ ಕಸ ಕಡಲತೀರದ ಅಂದಗೆಡಿಸಿದೆ’ ಎನ್ನುತ್ತಾರೆ ಸ್ಥಳೀಯ ಗಿರೀಶ್ ಬಿ. 

ಕಡಲತೀರದಲ್ಲಿ ನಡೆಯುವ ಉತ್ಸವದಿಂದ ಅಭಿವೃದ್ಧಿ ಸಮಿತಿಗೆ ಆದಾಯ ಸಂಗ್ರಹವಾಗುತ್ತಿದೆ. ಸೌಲಭ್ಯ ಕಲ್ಪಿಸಲು ನಗರಸಭೆಗೆ ಅವರು ಶುಲ್ಕ ಭರಿಸುವಂತೆ ಕೇಳಲಾಗಿದೆ
ರವಿರಾಜ್ ಅಂಕೋಲೇಕರ್ ನಗರಸಭೆ ಅಧ್ಯಕ್ಷ
ಕಡಲತೀರದ ನಿರ್ವಹಣೆಗೆ ಈಚೆಗೆ ಆದಾಯ ಸಂಗ್ರಹವಾಗುತ್ತಿದೆ. ನಿರ್ವಹಣೆಯ ಜವಾಬ್ದಾರಿ ಹಂಚಿಕೆ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನವಾಗಲಿದೆ
ಎಚ್.ವಿ.ಜಯಂತ್ ಜಿಲ್ಲಾ ಪ್ರವಾಸಿ ತಾಣಗಳ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ

ಶೌಚಾಲಯಗಳ ಬಾಗಿಲು ಬಂದ್ ‘ಕಡಲತೀರದಲ್ಲಿರುವ ಸಾರ್ವಜನಿಕ ಶೌಚಾಲಯಗಳು ಬಾಗಿಲು ತೆರೆಯುವುದೇ ಅಪರೂಪ. ಟ್ಯಾಗೋರ್ ಕಡಲತೀರದಲ್ಲಿ ಮೂರರಿಂದ ನಾಲ್ಕು ಶೌಚಾಲಯಗಳಿವೆ. ಬಹುತೇಕ ದಿನ ಅವು ಬಾಗಿಲು ಮುಚ್ಚಿಕೊಂಡೇ ಇರುತ್ತವೆ. ನಾಲ್ಕು ದಿನಗಳ ಹಿಂದೆ ಪ್ರವಾಸಕ್ಕೆ ಬಂದಿದ್ದ ಕೆಲವು ವಿದೇಶಿಗರು ಶೌಚಾಲಯದ ಬಾಗಿಲು ಮುಚ್ಚಿರುವುದು ಕಂಡು ಬೇಸರ ವ್ಯಕ್ತಪಡಿಸಿದ್ದರು’ ಎಂದು ಸ್ಥಳೀಯರಾದ ಜನಾರ್ದನ ನಾಯ್ಕ ದೂರಿದರು.

ಕೆಟ್ಟು ನಿಂತ ಬೀಚ್ ಸ್ವಚ್ಛತೆ ಯಂತ್ರ ಕಡಲತೀರ ಸ್ವಚ್ಛತೆಗೆ ಏಳು ವರ್ಷಗಳ ಹಿಂದೆ ಜಿಲ್ಲಾಡಳಿತ ಖರೀದಿಸಿದ್ದ ಬೀಚ್ ಸ್ವಚ್ಛತೆ ಯಂತ್ರ ಸದ್ಯ ಕೆಲಸ ನಿರ್ವಹಿಸುತ್ತಿಲ್ಲ. ಹಲವು ತಿಂಗಳಿನಿಂದ ಕೆಟ್ಟು ನಿಂತಿದೆ. ಯಂತ್ರವು ಉಪಯೋಗಿಸಿದ್ದಕ್ಕಿಂತ ತಾತ್ರಿಕ ದೋಷದಿಂದ ಶೆಡ್‍ನಲ್ಲಿ ನಿಂತಿದ್ದೇ ಹೆಚ್ಚು ಎಂಬುದು ಸಿಬ್ಬಂದಿಯ ದೂರು. ‘ಕಳೆದ ಎರಡು ವರ್ಷಗಳಿಂದ ಸ್ವಚ್ಛತೆ ಯಂತ್ರ ನಿರ್ವಹಣೆಯ ಜವಾಬ್ದಾರಿಯನ್ನು ನಗರಸಭೆಗೆ ವಹಿಸಿಕೊಡಲಾಗಿತ್ತು. ಯಂತ್ರ ಬಳಸಿ ಕಡಲತೀರ ಸ್ವಚ್ಛಗೊಳಿಸುವ ಕೆಲಸ ನಡೆದಿತ್ತು. ಅದರಲ್ಲಿನ ತಾಂತ್ರಿಕ ದೋಷ ಸರಿಪಡಿಸಲು ಆಗದೆ ಶೆಡ್‍ನಲ್ಲಿಡಲಾಗಿದೆ. ದುರಸ್ತಿಗೆ ಮುಂಬೈನಿಂದ ತಂತ್ರಜ್ಞರು ಬರಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.