ಕಾರವಾರ: ಜಿಲ್ಲೆಯ 23 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಇಲ್ಲಿನ ಜಲಮೂಲಗಳು ಬತ್ತಿದ್ದು ಟ್ಯಾಂಕರ್ ಮೂಲಕ ನೀರು ಪೂರೈಸುವ ಅನಿವಾರ್ಯತೆ ಉಂಟಾಗಿದೆ.
ಕುಮಟಾ, ಅಂಕೋಲಾ, ಶಿರಸಿ, ಕಾರವಾರ, ಯಲ್ಲಾಪುರ ಸೇರಿದಂತೆ 23 ಗ್ರಾಮ ಪಂಚಾಯಿತಿಗಳ 63 ಹಳ್ಳಿಗಳಿಗೆ ಟ್ಯಾಂಕರ್ ಬಳಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಆಯಾ ಗ್ರಾಮಗಳಿಗೆ ಸಮೀಪದ ಜಲಮೂಲಗಳಿಂದ ನೀರು ಸಂಗ್ರಹಿಸುವ ಟ್ಯಾಂಕರ್ ಗಳು ಮನೆ ಬಾಗಿಲಿಗೆ ತೆರಳಿ ನೀರು ಒದಗಿಸುತ್ತಿವೆ. ಈ ಕಾರ್ಯಕ್ಕೆ ಸದ್ಯ 55 ಟ್ಯಾಂಕರ್ ಬಳಕೆ ಆಗುತ್ತಿದೆ.
ಈ ಬಾರಿ ಮಳೆಯ ಕೊರತೆಯೂ ಉಂಟಾಗಿರುವುದು ಒಂದೆಡೆಯಾದರೆ, ಬಿಸಿಲಿನ ಝಳ ಹೆಚ್ಚಿರುವ ಪರಿಣಾಮದಿಂದ ಅಂತರ್ಜಲ ಮಟ್ಟದಲ್ಲಿ ತೀವೃ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಸರಾಸರಿ ಮಟ್ಟವು ಸುಮಾರು 9 ಮೀ. ತಲುಪಿದೆ. ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಕಡೆಗಳಲ್ಲಿ ಜಲಮೂಲಗಳಲ್ಲಿ ನೀರಿನ ಪ್ರಮಾಣವೂ ವಿಪರೀತ ಕಡಿಮೆಯಾಗಿದೆ.
ಕಳೆದ ವರ್ಷ ಅಷ್ಟೇನೂ ಬೇಡಿಕೆ ಇರದಿದ್ದ ಟ್ಯಾಂಕರಗಳಿಗೆ ಈ ಬಾರಿ ಹೆಚ್ಚು ಬೇಡಿಕೆ ಬರತೊಡಗಿದೆ. ಹಳ್ಳಿಗಳ ರಸ್ತೆಗಳಲ್ಲಿ ಟ್ಯಾಂಕರ್ ಓಡಾಟ ಸಾಮಾನ್ಯ ಎಂಬಂತಾಗಿದೆ.
‘ಹಳಿಯಾಳದ 20 ಸೇರಿದಂತೆ 74 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಿನ ಕೊರತೆಯ ಸಮಸ್ಯೆ ತಲೆದೋರಿದೆ. ಇಲ್ಲಿ ಪರ್ಯಾಯ ಜಲಮೂಲಗಳೂ ಇಲ್ಲ. ಹೀಗಾಗಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಅದರಿಂದ ನೀರು ಸರಬರಾಜು ಮಾಡುತ್ತಿದ್ದೇವೆ. 24 ಗ್ರಾಮ ಪಂಚಾಯಿತಿಗಳ 98 ಹಳ್ಳಿಗಳಿಗೆ ಈ ರೀತಿ ನೀರು ಪೂರೈಸುತ್ತಿದ್ದೇವೆ. ಪೈಕಿ ಹಳಿಯಾಳದಲ್ಲೇ 70 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳ ನೀರು ಬಳಕೆ ಅನಿವಾರ್ಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ತಳಿಸಿದರು.
‘ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ನೀರಿನ ಕೊರತೆ ಇರುವ ಕಡೆಯಲ್ಲಿ ಅಗತ್ಯ ವ್ಯವಸ್ಥೆಗೆ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ನಿರ್ಣಯ ಕೈಗೊಳ್ಳುತ್ತಿದೆ’ ಎಂದರು.
ಹಳಿಯಾಳ ತಾಲ್ಲೂಕಿನ 20 ಗ್ರಾ.ಪಂ.ಗಳಲ್ಲಿ ನೀರಿನ ಕೊರತೆ ಜನರಿಂದ ದೂರು ಆಲಿಸಲು ‘1950’ ಸಹಾಯವಾಣಿ ಆರಂಭ ಪರ್ಯಾಯ ಜಲಮೂಲಗಳಿಲ್ಲದೆ ಸಮಸ್ಯೆ
ಚುನಾವಣೆ ನೀತಿ ಸಂಹಿತೆ ಇದ್ದರೂ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಲಾಗುತ್ತಿದೆ. ಜನರಿಂದ ಬೇಡಿಕೆ ಬಂದ ತಕ್ಷಣ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.