ಕಾರವಾರ: 'ತೌಕ್ತೆ' ಚಂಡಮಾರುತ ಪ್ರಭಾವದಿಂದ ಅರಬ್ಬಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಭಟ್ಕಳದ ಜಾಲಿಕೋಡಿಯಲ್ಲಿ ನೀರು ಪಾಲಾಗುತ್ತಿದ್ದ ದೋಣಿಯನ್ನು ದಡಕ್ಕೆ ತರಲು ಹೋದ ಮೀನುಗಾರ, ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ.
ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ (60) ಮೃತರು. ದಡದಲ್ಲಿ ಲಂಗರು ಹಾಕಿದ್ದ ದೋಣಿಯೊಂದು ಅಲೆಗಳ ಹೊಡೆಕ್ಕೆ ನೀರು ಪಾಲಾಗುತ್ತಿತ್ತು. ಅದನ್ನು ತಡೆದು ದಡದಿಂದ ಮೇಲೆ ತರಲು ಅವರು ನೀರಿಗೆ ಇಳಿದ್ದರು. ಆಗ ಅಪ್ಪಳಿಸಿದ ಅಲೆಗೆ ಮತ್ತೊಂದು ದೋಣಿಯು ಅವರನ್ನು ದಡದಿಂದ ಮೇಲೆ ತರಬೇಕಿದ್ದ ದೋಣಿಯ ನಡುವೆ ಸಿಲುಕಿಸಿತು. ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಮೀಪದ ಗಾಳಿ ಗಿಡಗಳು, ಕಲ್ಲುಗಳು ನೀರು ಪಾಲಾಗುವ ಆತಂಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರು ದೋಣಿಗಳನ್ನು ದಡದಿಂದ ಮೇಲೆ ತಂದಿದ್ದಾರೆ.
ಗೋಕರ್ಣದ ದುಬ್ಬನಸಸಿ ಹಾಗೂ ಮೇನ್ ಬೀಚ್ ಪ್ರದೇಶದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಗಾಳಿಯ ವೇಗ ಹೆಚ್ಚಿದರೆ ಕಡಲ್ಕೊರೆತ ಉಂಟಾಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.