ಶಿರಸಿ: ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದವರು ಇಲ್ಲಿನ ಹೆಸ್ಕಾಂ ಇಇ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಏಕಾಏಕಿ ವಿದ್ಯುತ್ ಏರಿಕೆ ಮಾಡಿ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಬರೆ ಎಳೆದಿದೆ. ಇದು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಶ್ರೀಮಂತರ ಪರ ಇದೆ. ಬಡವರ ಬಗ್ಗೆ ಕಿಂಚಿತ್ತೂ ಕನಿಕರವಿಲ್ಲ. ವಿದ್ಯುತ್ ದರ ಇಳಿಕೆ ಮಾಡದಿದ್ದರೆ ಹೋರಾಟ ಮತ್ತಷ್ಟು ಬಲಗೊಳಿಸುವ ಎಚ್ಚರಿಕೆ ನೀಡಿದರು.
ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, 'ಮುಖ್ಯಮಂತ್ರಿ ರೈತರ ಹೆಸರಲ್ಲಿ ಪ್ರಮಾಣ ವಚನವಷ್ಟೇ ಸ್ವೀಕರಿಸುತ್ತಾರೆ. ಆದರೆ ರೈತರ ಪರ ಕಾಳಜಿ ಇಲ್ಲ. ವಿದ್ಯುತ್ ದರ ಏರಿಕೆಯಿಂದ ರೈತ ಸಮೂಹ, ಬಡವರು ಕಂಗಾಲಾಗಿದ್ದಾರೆ' ಎಂದರು.
ಪ್ರಮುಖರಾದ ಎಸ್.ಕೆ.ಭಾಗವತ್ ಮಾತನಾಡಿ, 'ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ವಿದ್ಯುತ್ ದರ ಹೆಚ್ಚಳ ಇದೆ. ಜನಸಾಮಾನ್ಯರ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಜನರ ಬೇಕು-ಬೇಡಗಳ ಅರಿವು ಸರ್ಕಾರಕ್ಕೆ ಇಲ್ಲ' ಎಂದರು.
ಮಾಧವ ರೇವಣಕರ್ ಮಾತನಾಡಿ, 'ಸರ್ಕಾರ ತನ್ನ ಮನಸ್ಸಿಗೆ ತೋಚಿದಂತೆ ನಿರ್ಧಾರ ಕೈಗೊಳ್ಳುತ್ತಿದೆ. ವಿದ್ಯುತ್ ದರ ಏರಿಕೆ ಮಾಡುವ ಅಗತ್ಯ ಇರಲಿಲ್ಲ' ಎಂದರು.
ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್
ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ ಮಾತನಾಡಿ, 'ಇಂಧನ ಬೆಲೆ ಹೆಚ್ಚಿದೆ.ಕೊರೊನಾದಿಂದ ಉದ್ಯೋಗಾವಕಾಶ ಸಿಗದಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ನಿರ್ಧಾರ ಸರಿಯಲ್ಲ' ಎಂದರು.
ಪ್ರಮುಖರಾದ ಆರ್.ಎಚ್.ನಾಯ್ಕ, ಜಗದೀಶ ಗೌಡ, ನಾಗರಾಜ ಮಡಿವಾಳ, ಅಬ್ಬಾಸ್ ತೊನ್ಸೆ, ಸುಜಾತಾ ಗಾಂವಕರ್, ಸುಮಾ ಉಗ್ರಾಣಕರ್, ಜ್ಯೋತಿ ಪಾಟೀಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.