ಶಿರಸಿ: ವೈದ್ಯ ಹಾಗೂ ಜ್ಯೋತಿಷ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲ ಶಾಸ್ತ್ರಗಳು ವೈದ್ಯ ಮತ್ತು ಜ್ಯೋತಿಷ್ಯದಲ್ಲಿ ಅಡಗಿವೆ ಎಂದು ವೇದಮೂರ್ತಿ ನಾಗೇಂದ್ರ ಭಟ್ಟ ಹಿತ್ಲಳ್ಳಿ ಹೇಳಿದರು.
ತಾಲ್ಲೂಕಿನ ಹುಲೇಕಲ್ ಕೆಂಗ್ರೆಮಠದಲ್ಲಿ ಭಾನುವಾರ ನಡೆದ ಶ್ರೀ ಶಕ್ತಿ ಪಾರಂಪರಿಕ ವೈದ್ಯರ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವೈದ್ಯ ಶಾಸ್ತ್ರ ನಮಗೆ ಬದುಕನ್ನು ಕೊಡುತ್ತದೆ. ಅನ್ನಪ್ರಾಶನ ಮಾಡುವಾಗ ತಾಯಿ ಮೊದಲ ತುತ್ತಿನಲ್ಲಿ ವನಸ್ಪತಿಯ ರಸವನ್ನು ಕೊಟ್ಟು, ಆರೋಗ್ಯ ಕಾಪಾಡಿಕೊಳ್ಳುವಂತೆ ಹಾರೈಸುತ್ತಾಳೆ. ಒಂದೆಲಗ, ಕಾಳುಮೆಣಸು, ಬಜೆ ಇವನ್ನು ಚಿಕ್ಕಂದಿನಿಂದ ನಮಗೆ ಕೊಟ್ಟು ನಿಸರ್ಗದ ಜೊತೆ ಬದುಕನ್ನು ಕಲಿಸುತ್ತಾಳೆ’ ಎಂದರು.
ಪಾರಂಪರಿಕ ವೈದ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ. ಹೆಗಡೆ ಮಕ್ಕಳತಾಯಿಮನೆ ಕೇಂದ್ರವನ್ನು ಉದ್ಘಾಟಿಸಿದರು. ಮಂಗಳೂರಿನ ಅನುಭವಿ ಮತ್ತು ವಂಶ ಪಾರಂಪರಿಕ ವೈದ್ಯರ ಸಂಘದ ಪ್ರಧಾನ ಸಂಯೋಜಕ ಬಿ.ಎಸ್.ಚಂದ್ರು ಮಾತನಾಡಿ, ‘ಶ್ರೀ ಶಕ್ತಿ ಪಾರಂಪರಿಕ ವೈದ್ಯ ಕೇಂದ್ರವು ರಾಜ್ಯ ಮತ್ತು ದೇಶದಲ್ಲಿ ಆರಂಭಗೊಂಡ ಮೊದಲ ಪಾರಂಪರಿಕ ವೈದ್ಯರ ಕೇಂದ್ರವಾಗಿದೆ. ಪಾರಂಪರಿಕ ವೈದ್ಯರು ಅಬಲರಲ್ಲ, ಅವರಿಗೆ ಕಾನೂನಿನ ರಕ್ಷಣೆಯಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ಸಿಗಲಿದೆ. ಅದಕ್ಕೆ ನಿರಂತರ ಹೋರಾಟದ ಅಗತ್ಯವಿದೆ’ ಎಂದರು.
ಪಾರಂಪರಿಕ ಔಷಧವನ್ನು ಪಡೆದು ಕಾಯಿಲೆ ವಾಸಿಮಾಡಿಕೊಂಡ ಬಗ್ಗೆ ಅನೇಕರು ಅನುಭವ ಹಂಚಿಕೊಂಡರು. ಕಿಡ್ನಿಕಲ್ಲು, ತಲೆನೋವು, ಚವಿ ದೋಷ, ಹಲ್ಲುನೋವು ಮೊದಲಾದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಔಷಧ ನೀಡಲಾಯಿತು. ರಾಮಚಂದ್ರ ಭಟ್ಟ ದೇವಗೊಡ್ಲು ನಿರೂಪಿಸಿದರು. ಸುಮಂಗಲಾ ಹೆಗಡೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.