ಕುಮಟಾ: ‘ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸದಿದ್ದರೆ ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಕರ ಮಾದರಿಯ ಕೊರತೆ ಉಂಟಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಜಿ.ಯು.ನಾಯಕ ಅಭಿನಂದನಾ ಸಮಾರಂಭ ಉದ್ಘಾಟಿಸಿ, `ಮಾನನಿಧಿ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಆಫ್ರಿಕನ್ ವಿವಿ ನಿವೃತ್ತ ಡೀನ್, ಜಿ.ಎ.ಹೆಗಡೆ ಮಾತನಾಡಿ, ‘ಜಿ.ಯು.ನಾಯಕ ಅವರ ಆತ್ಮೀಯತೆಯ ತೆಕ್ಕೆಗೆ ಸಿಕ್ಕ ಸಾಹಿತಿಗಳು, ಶಿಕ್ಷಕರನ್ನು ಅವರು ಆತಿಥ್ಯ ನೀಡದೆ ಬಿಡುತ್ತಿರಲಿಲ್ಲ. ತಮ್ಮ ನೆಚ್ಚಿನ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅವರಿಗೆ ಅಗತ್ಯವಿರುವ ಪುಸ್ತಕ ಹಂಚಿದ್ದಾರೆ’ ಎಂದರು.
ಸಿದ್ದಾಪುರದ ಶಿಕ್ಷಣ ಪ್ರಸಾರ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ‘ ನಮ್ಮ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಉಂಟಾಗಲು ಜಿ.ಯು.ನಾಯಕರಂಥ ಶಿಕ್ಷಕರ ಸಮುದಾಯ ಕಾರಣ’ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕ ಜಿ.ಯು.ನಾಯಕ, ಉಡುಪಿ, ‘ದಕ್ಷ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನು ಶಿಕ್ಷಕನಾಗಿ ಹೆಚ್ಚಿನ ಕಾಲ ಸೇವೆ ಸಲ್ಲಿಸಿದರೂ ಜಿಲ್ಲೆಯ ಗೆಳೆಯರು ನನ್ನನ್ನು ಗೌರವಿಸಿರುವುದು ವಿಶೇಷ' ಎಂದರು.
ಹಿರಿಯ ಸಾಹಿತಿ, ಎನ್.ಆರ್.ನಾಯಕ, ನಿವೃತ್ತ ಎಸ್ಪಿ ಎನ್.ಟಿ.ಪ್ರಮೋದ ರಾವ್, ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ‘ಮಾನನಿಧಿ’ ಅಬಿನಂದನಾ ಗ್ರಂಥ ಸಂಪಾದಕ ಜಗನ್ನಾಥ ಮೊಗೇರ, ನಿವೃತ್ತ ಮುಖ್ಯ ಶಿಕ್ಷಕ ಎನ್.ಆರ್.ಗಜು, ಸೋಮಪ್ರಕಾಶ ಶೇಟ್, ವಸಂತ ನಾಯಕ, ಸಾಹಿತಿ ಶಾಂತಿ ನಾಯಕ, ರಾಜೀವ ಗಾಂವಕರ್ ಇದ್ದರು.
ದಿವ್ಯಪ್ರಕಾಶ ನಾಯಕ ಸ್ವಾಗತಿಸಿದರು. ಎನ್.ರಾಮು, ಪಲ್ಲವಿ ಹೆಗಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.