ಶಿರಸಿ: ತಾಲ್ಲೂಕಿನ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಸರ್ವೆಸಂಖ್ಯೆ 53ರಲ್ಲಿ ಡಿಸ್ಫಾರೆಸ್ಟ್ ಆಗಿರುವ ದಾಖಲೆ ಸಿಗುವವರೆಗೂ ಯಾವುದೇ ಸೌಲಭ್ಯ ನೀಡಬಾರದೆನ್ನುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ದೀಪಕ ದೊಡ್ಡೂರು ಒತ್ತಾಯಿಸಿದ್ದಾರೆ.
ಈ ಹಿಂದೆ ಕಂದಾಯ ಇಲಾಖೆಯು ಚಿಪಗಿ ಗ್ರಾಮದ ಸರ್ವೆಸಂಖ್ಯೆ 53ರಲ್ಲಿ 60 ಎಕರೆ ಜಾಗವನ್ನು ಸಾರ್ವಜನಿಕರ ವಾಸದ ನಿವೇಶನಕ್ಕಾಗಿ 497 ಪ್ಲಾಟ್ಗಳನ್ನು ಹಂಚಿಕೆ ಮಾಡಿತ್ತು. 1972 ಇಸವಿಯಲ್ಲಿ ಈ ಆದೇಶವಾಗಿದೆ. ಕಳೆದ ವರ್ಷ ಏಕಾಏಕಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಜಂಟಿ ಸಭೆ ಕರೆದು, ಈ ಜಾಗ ಡಿಸ್ಫಾರೆಸ್ಟ್ ಆದ ಬಗ್ಗೆ ಯಾವುದೆ ದಾಖಲೆಗಳಿಲ್ಲ, ಈ ಹಿನ್ನಲೆಯಲ್ಲಿ ಡಿಸ್ಫಾರೆಸ್ಟ್ ಪ್ರತಿ ಸಿಗುವವರೆಗೂ ನಿವಾಸಿಗಳು ಯಾವುದೇ ರೀತಿಯ ವ್ಯವಹಾರ ಮಾಡುವಂತಿಲ್ಲ ಎನ್ನುವ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಶಾಸಕರೂ ಆಗಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸಾರ್ವಜನಿಕರ ಅಳಲನ್ನು ಗಮನಿಸಿ, ಸಮಸ್ಯೆ ನಿವಾರಿಸಲು ಮುಂದಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.