ಶಿರಸಿ: ವೈಕುಂಠ ಏಕಾದಶಿ ನಿಮಿತ್ತ ನಗರದ ವೆಂಕಟೇಶ್ವರ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜೆ, ಉತ್ಸವಗಳು ನಡೆದವು.
ರಾಯರಪೇಟೆಯ ವೆಂಕಟರಮಣ ದೇವಾಲಯದಲ್ಲಿ ಬೆಳಗಿನಜಾವ 4.30ಕ್ಕೆ ವೈಕುಂಠ ದ್ವಾರದ ಪೂಜೆ ನಡೆಯಿತು. ವಿಶೇಷ ದೀಪಾಲಂಕಾರದಲ್ಲಿ ದೇವರ ವಿಶ್ವರೂಪ ದರ್ಶನವನ್ನು ಭಕ್ತರು ಕಂಡು, ಪುನೀತರಾದರು.
ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿರುವ ಹಿನ್ನೆಲೆಯಲ್ಲಿ ದ್ವಾರ ಪ್ರವೇಶಿಸಿದ ಭಕ್ತರು, ಭಗವಂತನಲ್ಲಿ ಪ್ರಾರ್ಥಿಸಿದರು.
ವಿಶ್ವರೂಪ ದರ್ಶನದ ದಿನ ಲಾಡು ಸೇವೆ, ಎಣ್ಣೆ ಸೇವೆ, ಉದಯಾಸ್ತಮಾನ ಸೇವೆ, ದೊಡ್ಡಹೂವಿನ ಹಾರದ ಸೇವೆ, ವಿಶೇಷ ಪುಷ್ಪಾಲಂಕಾರ ಸೇವೆ, ಮನವಾರ ಸೇವೆ, ಸರ್ವ ಸೇವೆ, ದೀಪಾರಾಧನೆ ಸೇವೆಗಳು ನೆರವೇರಿದವು.
ಸಂಜೆ ಸಹಸ್ರಾಧಿಕ ನಂದಾದೀಪಗಳನ್ನು ಜನರು ಬೆಳಗಿದರು. ಸಂದಾದೀಪದ ಬೆಳಕಿನಲ್ಲಿ ದೇವರ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಸಹಸ್ರಾರು ಜನರು ದೇವಾಲಯಕ್ಕೆ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.