ADVERTISEMENT

ವಿವೇಕಾನಂದ ನಿಜವಾದ ಜಾತ್ಯತೀತರು: ಚಕ್ರವರ್ತಿ ಸೂಲಿಬೆಲೆ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 12:14 IST
Last Updated 2 ಅಕ್ಟೋಬರ್ 2018, 12:14 IST
‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಅಂಗವಾಗಿ ಶಿರಸಿಗೆ ಬಂದಿದ್ದ ರಥವನ್ನು ಕಾಲೇಜು ವಿದ್ಯಾರ್ಥಿಗಳು ಸ್ವಾಗತಿಸಿದರು
‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಅಂಗವಾಗಿ ಶಿರಸಿಗೆ ಬಂದಿದ್ದ ರಥವನ್ನು ಕಾಲೇಜು ವಿದ್ಯಾರ್ಥಿಗಳು ಸ್ವಾಗತಿಸಿದರು   

ಶಿರಸಿ: ‘ಗಾಂಧೀಜಿಗೆ ಜಾತ್ಯತೀತವಾದದ ಭ್ರಮೆ ಇತ್ತು, ಆದರೆ ವಿವೇಕಾನಂದ ನಿಜವಾದ ಜಾತ್ಯತೀತರಾಗಿದ್ದರು. ಅವರನ್ನು ಈ ಭೂಮಿಯ ಮೇಲಿನ ವಿಶ್ವಮಾನವ ಎಂದು ಕರೆಯುತ್ತಿದ್ದರು’ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದರ ಷಿಕಾಗೊ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ನಡೆಯುತ್ತಿರುವ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಮಂಗಳವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ನಾಯಕರ ಬಗ್ಗೆ ನೇರವಾಗಿ ಮಾತನಾಡುವ ಸಾಮರ್ಥ್ಯ ಇದ್ದವರು ವಿವೇಕಾನಂದರು. ಆದರೆ, ಗಾಂಧೀಜಿಗೆ ಎದುರು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಅವರು ಗೋವನ್ನು ತುಂಬಾ ಪ್ರೀತಿಸುತ್ತಿದ್ದರು ಆದರೆ, ಗೋವಿನ ಹತ್ಯೆಯನ್ನು ಧೈರ್ಯವಾಗಿ ವಿರೋಧಿಸಿ, ಬೈಯ್ಯುವ ತಾಕತ್ತನ್ನು ಇಟ್ಟುಕೊಂಡಿರಲಿಲ್ಲ. ಬ್ರಿಟಿಷರು ಮುಸಲ್ಮಾನರನ್ನು ಎತ್ತಿಕಟ್ಟುವಾಗ ಅವರನ್ನು ತಬ್ಬಿಕೊಳ್ಳುವ ಪ್ರಯತ್ನದಲ್ಲಿದ್ದರು ಗಾಂಧೀಜಿ ಎಂದರು.

ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್‌ ಶಾಸ್ತ್ರಿ ಈ ಮೂವರೂ ಉನ್ನತ ಸ್ಥಾನಕ್ಕೇರಿದರೂ, ಸರಳತೆಯನ್ನು ಕಾಯ್ದುಕೊಂಡಿದ್ದರು ಎಂದು ಹೇಳಿದರು.

ADVERTISEMENT

ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಯುವಜನರಿಗೆ ಬೌಂಡ್ರಿ ಹೊಡೆಯುವವರ ಬಗ್ಗೆ ಇದ್ದ ಆಕರ್ಷಣೆ, ಬೌಂಡ್ರಿ ಕಾಯವವರ ಬಗ್ಗೆ ಇಲ್ಲ. ಯುವಜನರು ರಾಷ್ಟ್ರ ಕಟ್ಟು ಕಾಯಕದಲ್ಲಿ ತೊಡಗಿಕೊಳ್ಳಬೇಕು. ದೇಶ ಕಾಯವವರು ನಮಗೆ ಆದರ್ಶರಾಗಬೇಕು’ ಎಂದರು. ಕ್ರೀಡಾಪಟು ಸಂಪೂರ್ಣಾ ಹೆಗಡೆ ಮಾತನಾಡಿ, ‘ಕನಸು ಮನುಷ್ಯನ ನಿದ್ದೆಗೆಡಿಸಬೇಕು. ಕನಸು ನನಸಾಗುವ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ, ಚೈತನ್ಯ ಸಿಗುತ್ತದೆ’ ಎಂದರು. ಯುವ ಗಾಯಕ ರಜತ್ ಹೆಗಡೆ ಭಕ್ತಿಗೀತೆಯನ್ನು ಅದ್ಭುತವಾಗಿ ಹಾಡಿದರು.

ಕಾರ್ಯಕ್ರಮದ ಪೂರ್ವದಲ್ಲಿ ರಥಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.