ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನವಿಡೀ ಮಳೆ: ಕದ್ರಾ ಜಲಾಶಯದಿಂದ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 15:58 IST
Last Updated 14 ಜುಲೈ 2021, 15:58 IST
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯವು ಭರ್ತಿಯಾಗಿದ್ದು, ಬುಧವಾರ ಆರು ಕ್ರೆಸ್ಟ್‌ಗೇಟ್‌ಗಳನ್ನು ತೆರೆದು 40 ಸಾವಿರ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಯಿತು. 34.50 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಈ ವರ್ಷ 32 ಮೀಟರ್ ನೀರು ಸಂಗ್ರಹಿಸಲು ತೀರ್ಮಾನಿಸಲಾಗಿತ್ತು
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯವು ಭರ್ತಿಯಾಗಿದ್ದು, ಬುಧವಾರ ಆರು ಕ್ರೆಸ್ಟ್‌ಗೇಟ್‌ಗಳನ್ನು ತೆರೆದು 40 ಸಾವಿರ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಯಿತು. 34.50 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಈ ವರ್ಷ 32 ಮೀಟರ್ ನೀರು ಸಂಗ್ರಹಿಸಲು ತೀರ್ಮಾನಿಸಲಾಗಿತ್ತು   

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ಬುಧವಾರವೂ ಮುಂದುವರಿಯಿತು. ಕಾರವಾರದಲ್ಲಿ ಮಂಗಳವಾರ ರಾತ್ರಿ ಶುರುವಾದ ವರ್ಷಧಾರೆ, ಬುಧವಾರ ಬೆಳಿಗ್ಗೆಯವರೆಗೂ ನಿರಂತರವಾಗಿತ್ತು. ಹಗಲು ಒಂದೆರಡು ಬಾರಿ ಸಣ್ಣ ವಿರಾಮದ ಬಳಿಕ ಮತ್ತೆ ದಟ್ಟವಾದ ಮೋಡ ಮೇಳೈಸಿ ಜೋರಾಗಿ ಮಳೆಯಾಯಿತು.

ಕರಾವಳಿಯಾದ್ಯಂತ ಮತ್ತು ಘಟ್ಟದ ಮೇಲಿನ ತಾಲ್ಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ, ಹಳಿಯಾಳದಲ್ಲೂ ಉತ್ತಮ ಮಳೆ ಬಂತು. ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಬುಧವಾರ ಸಂಜೆ 4ರ ವೇಳೆಗೆ 31.36 (ಗರಿಷ್ಠ 34.50 ಮೀಟರ್) ಮೀಟರ್‌ಗೆ ತಲುಪಿದೆ. ಜಲಾಶಯಕ್ಕೆ 22,111 ಕ್ಯುಸೆಕ್ ಒಳಹರಿವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದ ಮೂರು ಕ್ರೆಸ್ಟ್‌ ಗೇಟ್‌ಗಳಿಂದ ಕಾಳಿ ನದಿಗೆ 10,050 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಜೊತೆಗೇ ವಿದ್ಯುತ್ ಉತ್ಪಾದಿಸಿ 17,848 ಕ್ಯುಸೆಕ್ ಬಿಡಲಾಗುತ್ತಿದೆ.

ಶಿರಸಿಯ ಗುಡ್ನಾಪುರ ಗ್ರಾಮದ ಮುಂಡಿಗೆಹಳ್ಳಿಯಲ್ಲಿ ಮಂಗಳವಾರ ಮನೆ ಬಿದ್ದು ಮೃತಪಟ್ಟ ಯಶೋದಾ ಬಂಗಾರ್ಯ ಗೌಡ (31) ಕುಟುಂಬಕ್ಕೆ ಸರ್ಕಾರವು ₹ 5 ಲಕ್ಷ ಪರಿಹಾರ ವಿತರಣೆ ಮಾಡಿದೆ. ಘಟನೆ ನಡೆದು 16 ಗಂಟೆಗಳಲ್ಲೇ ಪರಿಹಾರ ಸಿಗಲು ನೆರವಾದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.