
ಯಲ್ಲಾಪುರ: ಪಟ್ಟಣದ ಗ್ರಾಮದೇವಿ ಜಾತ್ರೆಯ ಅವಧಿಯಲ್ಲಿ ತೆರವುಗೊಳಿಸಲಾಗಿದ್ದ ಗೂಡಂಗಡಿಗಳು ಮತ್ತೆ ಒಂದೊಂದಾಗಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸತೊಡಗಿವೆ. ಬಸ್ ನಿಲ್ದಾಣದ ಎದುರಿನಿಂದ ಹಳೇ ತಾಲ್ಲೂಕು ಕಚೇರಿ ಮಾರ್ಗದಲ್ಲಿ, ಬಸ್ ನಿಲ್ದಾಣ ಸರ್ಕಲ್ನಿಂದ ಬಸವೇಶ್ವರ ವೃತ್ತದವರೆಗೆ ಹಾಗೂ ವೈಟಿಎಸ್ಎಸ್ ಕಾಲೇಜು ರಸ್ತೆಯಲ್ಲಿರುವ ಪಾದಚಾರಿ ಮಾರ್ಗಗಳು ಅತಿಕ್ರಮಗೊಂಡಿದ್ದು, ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿವೆ.
‘ಪಾದಚಾರಿ ಮಾರ್ಗದಲ್ಲಿ ನಡೆದಾಡಲು ಸಾಧ್ಯವಾಗದಂತೆ ಅಲ್ಲಲ್ಲಿ ಕಲ್ಲು ಇಡಲಾಗುತ್ತಿದೆ. ಕೆಲವೆಡೆ ಸಂಚಾರಿಸುವ ದಾರಿ ಬಂದ್ ಮಾಡಲಾಗುತ್ತಿದೆ. ರಸ್ತೆಯ ಪಕ್ಕ ಮಣ್ಣು ಹಾಕಿ ಗೂಡಂಗಡಿ ಇಡಲು ಸ್ಥಳ ಸಜ್ಜುಗೊಳಿಸಲಾಗುತ್ತಿದೆ. ಅನೇಕ ಕಡೆ ಸಾಮಗ್ರಿ ಇಟ್ಟು ಸ್ಥಳ ಕಾಯ್ದಿರಿಸಲಾಗುತ್ತಿದೆ. ಹಾಗಾಗಿ ರಸ್ತೆಯಲ್ಲಿಯೇ ಸಂಚರಿಸುವುದು ಅನಿವಾರ್ಯವಾಗಿದೆ’ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ.
‘ಬಸ್ ನಿಲ್ದಾಣದ ಎದುರಿನ ರಸ್ತೆಯ ಎರಡೂ ಪಕ್ಕದಲ್ಲಿ ಒತ್ತುವರಿ ಮಾಡಿ ಗೂಡಂಗಡಿ ಹಾಕಲಾಗುತ್ತಿದೆ. ಇದರಿಂದ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳವೇ ಸಿಗುತ್ತಿಲ್ಲ. ಪಾದಚಾರಿ ಮಾರ್ಗವನ್ನು ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಬೇಕು. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಒತ್ತುವರಿ ಮಾಡಿಕೊಂಡ ಗೂಡಂಗಡಿಗಳನ್ನು ತೆರವುಗೊಳಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.