ADVERTISEMENT

ಅಗತ್ಯ ವಸ್ತು ಪೂರೈಕೆಗೆ ವೆಬ್ ಪುಟ

ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ತಂತ್ರಜ್ಞಾನದ ಬಳಕೆ

ಸದಾಶಿವ ಎಂ.ಎಸ್‌.
Published 31 ಮಾರ್ಚ್ 2020, 19:45 IST
Last Updated 31 ಮಾರ್ಚ್ 2020, 19:45 IST
ಜಿಲ್ಲೆಯ ವಿವಿಧ ಗ್ರಾಮಗಳಿಂದ ಅಗತ್ಯ ವಸ್ತುಗಳಿಗೆ ಬಂದಿರುವ ಬೇಡಿಕೆಯ ಪಟ್ಟಿಯನ್ನು ಜಿಲ್ಲಾ ಪಂಚಾಯ್ತಿಯ ವೆಬ್ ಪುಟದಲ್ಲಿ ದಾಖಲಿಸಿರುವುದು
ಜಿಲ್ಲೆಯ ವಿವಿಧ ಗ್ರಾಮಗಳಿಂದ ಅಗತ್ಯ ವಸ್ತುಗಳಿಗೆ ಬಂದಿರುವ ಬೇಡಿಕೆಯ ಪಟ್ಟಿಯನ್ನು ಜಿಲ್ಲಾ ಪಂಚಾಯ್ತಿಯ ವೆಬ್ ಪುಟದಲ್ಲಿ ದಾಖಲಿಸಿರುವುದು   

ಕಾರವಾರ: ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯ ಜನರಿಗೆ ಅಗತ್ಯವಾದ ಜೀವನೋಪಾಯದ ವಸ್ತುಗಳು ಮತ್ತು ಔಷಧಗಳ ಪೂರೈಕೆಗೆ ಜಿಲ್ಲಾ ಪಂಚಾಯ್ತಿಯು ತಂತ್ರಜ್ಞಾನದ ಮೊರೆ ಹೋಗಿದೆ. ಇದಕ್ಕಾಗಿ ವೆಬ್‌ ಪುಟವೊಂದನ್ನು ಸಿದ್ಧಪಡಿಸಿದ್ದು, ಜನರಿಗೆ ವ್ಯವಸ್ಥಿತವಾಗಿ ಸ್ಪಂದಿಸಲು ವಿನೂತನ ಹೆಜ್ಜೆಯಿಟ್ಟಿದೆ.

ಜಿಲ್ಲೆಯ ಜನರಿಗೆ ಆಹಾರ ಮತ್ತು ಔಷಧಗಳ ಸೂಕ್ತ ರೀತಿಯ ವಿತರಣೆಗೆ ಎಲ್ಲ ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿದೆ. ಈ ಕಾರ್ಯತಂತ್ರಕ್ಕಾಗಿ ಪ್ರತಿ ಗ್ರಾಮ ಪಂಚಾಯ್ತಿಯನ್ನೂ ಕ್ಲಸ್ಟರ್ ಎಂದು ಗುರುತಿಸಲಾಗಿದ್ದು, ಇದನ್ನು ಡಾಟ ಎಂಟ್ರಿ ಆಪರೇಟರ್ ನಿಭಾಯಿಸುತ್ತಾರೆ. ಅವರ ಮೂಲಕ ಎಲ್ಲ ಕಾರ್ಯ ಚಟುವಟಿಕೆಗಳು ನೆರವೇರುವಂತೆ ವೆಬ್ ಪುಟವನ್ನು ವಿನ್ಯಾಸಗೊಳಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್,‘ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದ ಕ್ಲಸ್ಟರ್‌ ಅನ್ನು ಡಾಟಾ ಎಂಟ್ರಿ ಆಪರೇಟರ್ ನಿಭಾಯಿಸುತ್ತಾರೆ.ಅವರುಪ್ರತಿ ದಿನ ತಮ್ಮ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಕರೆ ಮಾಡುತ್ತಾರೆ. ಗ್ರಾಮ ಮಟ್ಟದಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆಯಿದೆ, ಯಾವುದು ಅಗತ್ಯವಿದೆ ಎಂದು ಪಿ.ಡಿ.ಒ ತಿಳಿಸುತ್ತಾರೆ.ಅದನ್ನು ಡಾಟಾ ಎಂಟ್ರಿ ಆಪರೇಟರ್ ವೆಬ್ ಪುಟದಲ್ಲಿ ನಮೂದಿಸುತ್ತಾರೆ.ಜಿಲ್ಲಾ ಸಹಾಯವಾಣಿಗೆ ಬಂದ ಕರೆಗಳಲ್ಲಿ ದೊರೆತ ಮಾಹಿತಿಯನ್ನೂ ವೆಬ್ ಪುಟದಲ್ಲಿ ಉಲ್ಲೇಖಿಸುತ್ತಾರೆ’ ಎಂದು ತಿಳಿಸಿದರು.

ADVERTISEMENT

‘ಈ ಮಾಹಿತಿಗಳನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದ ಜಿಲ್ಲಾಮಟ್ಟದ ಸಮಿತಿ ಪ್ರತಿ ದಿನ ಪರಿಶೀಲಿಸುತ್ತದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರೂ ಈ ಸಮಿತಿಯಲ್ಲಿ ಇದ್ದಾರೆ. ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಆಹಾರ ಪೂರೈಕೆಗೆ ಈ ವೆಬ್ ಪುಟದಿಂದ ಅನುಕೂಲವಾಗಲಿದೆ. ಅಲ್ಲದೇ ಜಿಲ್ಲಾ ಪಂಚಾಯ್ತಿಗೂ ತಕ್ಷಣವೇ ಸ್ಪಂದಿಸಲು ಇದರಿಂದ ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲಾ ಪಂಚಾಯ್ತಿಯ ನೋಡಲ್ ಅಧಿಕಾರಿಗಳು ಈ ವೆಬ್ ಪುಟಕ್ಕೆ ಲಾಗಿನ್ ಆಗಿ, ದಿನದ ಬೇಡಿಕೆಗಳ ಬಗ್ಗೆಗುರುತು ಮಾಡಿಕೊಳ್ಳುತ್ತಾರೆ. ಬಳಿಕ ಅದನ್ನು ಜಿಲ್ಲಾಮಟ್ಟದ ಸಮಿತಿಯ ಮೂಲಕ ಪರಿಶೀಲಿಸಿ, ಯಾವ ಗ್ರಾಮಕ್ಕೆ ಏನು ಬೇಕಾಗಿದೆ ಎಂದು ಗುರುತಿಸಿ ವಿತರಣೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ತಾಲ್ಲೂಕುವಾರು ಪಟ್ಟಿ: ಜಿಲ್ಲೆಯ ಪ್ರತಿ ತಾಲ್ಲೂಕುಗಳಿಂದಲೂ ಜನರ ಬೇಡಿಕೆಗಳನ್ನು ಈ ವೆಬ್ ಪುಟದಲ್ಲಿ ನಮೂದಿಸಲಾಗುತ್ತದೆ. ತಾಲ್ಲೂಕುವಾರು ಪಟ್ಟಿಯೇ ಸಿಗುವ ಕಾರಣ ತ್ವರಿತವಾಗಿ ಮತ್ತು ಪರಿಣಾಮಕಾರಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂಬುದು ಮೊಹಮ್ಮದ್ ರೋಶನ್ ಅವರ ವಿಶ್ವಾಸವಾಗಿದೆ.

ಹಣ್ಣು, ತರಕಾರಿ, ಮುಖಗವಸು, ಸ್ಯಾನಿಟೈಸರ್, ದಿನಸಿ.. ಈ ರೀತಿ ಅಗತ್ಯವಾದ ಜೀವನೋಪಾಯದ ವಸ್ತುಗಳು ಮತ್ತು ಔಷಧಗಳು ಎಲ್ಲೆಲ್ಲಿಗೆ ಬೇಕಾಗಿವೆ ಎಂದು ಗುರುತಿಸಿ ಕಳುಹಿಸಿಕೊಡುವ ಜವಾಬ್ದಾರಿಯನ್ನು ನೋಡಲ್ ಅಧಿಕಾರಿಗೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.