ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ₹200 ಕೋಟಿ ಅನುದಾನ ನೀಡಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ವಾರ್ಡ್ನಲ್ಲಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂಡಲಪಾಳ್ಯ ವಾರ್ಡ್ನಲ್ಲಿ ನೆಲಮಟ್ಟದ ಜಲ ಸಂಗ್ರಹಾಗಾರ, ಕಾವೇರಿಪುರದಲ್ಲಿನ ನಾಡಪ್ರಭು ಕೆಂಪೇಗೌಡ ಬಹುಪಯೋಗಿ ಕಟ್ಟಡಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಕೆಂಪೇಗೌಡರ ಹೆಸರಿನಲ್ಲಿ ಬಹುಉಪಯೋಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. 3.5 ದಶಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಜಲಸಂಗ್ರಹಗಾರ, 52 ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗಿದೆ .75 ಶುದ್ದ ಕುಡಿಯುವ ನೀರಿನ ಘಟಕ, 17 ಗ್ರಂಥಾಲಯ, 24 ಬ್ಯಾಡ್ಮಿಂಟನ್ ಅಂಕಣ, 17 ವ್ಯಾಯಾಮ ಕೇಂದ್ರ,ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ ಮತ್ತು ಪೇಜಾವರ ಶ್ರೀ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ, ‘ಖಾಲಿ ಜಾಗಗಳನ್ನು ಕಂಡರೆ ಅದನ್ನು ಕಬಳಿಸಲು ಯೋಚಿಸುವ ರಾಜಕಾರಣಿಗಳು ಇದ್ದಾರೆ. ವಿ.ಸೋಮಣ್ಣ ಅವರು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸುವುದು ಹೇಗೆ ಎಂದು ಯೋಚಿಸುತ್ತಾರೆ. ಅದರಿಂದಲೇ ಇಷ್ಟೆಲ್ಲಾ ಅಭಿವೃದ್ಧಿಯನ್ನು ಕ್ಷೇತ್ರ ಕಂಡಿದೆ’ ಎಂದು ಬಣ್ಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.