ADVERTISEMENT

ಹಲೋ. ಬೊಂಬಾಟ್‌. ಲವ್ಲಿ; ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದ ನಟ ರಮೇಶ ಅರವಿಂದ್

ನಗೆ ಚಟಾಕಿ ಹಾರಿಸುತ್ತಲೇ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದ ನಟ ರಮೇಶ ಅರವಿಂದ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 13:54 IST
Last Updated 9 ನವೆಂಬರ್ 2021, 13:54 IST
ಹೊಸಪೇಟೆಯ ಶ್ರೀ ಗುರು ಪಿಯು ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನಟ ರಮೇಶ ಅರವಿಂದ್‌ ಅವರೊಂದಿಗೆ ಕೈಕುಲುಕಿ ಸಂಭ್ರಮಿಸಿದರು
ಹೊಸಪೇಟೆಯ ಶ್ರೀ ಗುರು ಪಿಯು ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನಟ ರಮೇಶ ಅರವಿಂದ್‌ ಅವರೊಂದಿಗೆ ಕೈಕುಲುಕಿ ಸಂಭ್ರಮಿಸಿದರು   

ಹೊಸಪೇಟೆ (ವಿಜಯನಗರ): ಹಲೋ.. ಬೊಂಬಾಟ್‌.. ಲವ್ಲಿ..

ಹೀಗೆ ಖುಷಿ ಖುಷಿಯಾಗಿ ಉತ್ಸಾಹದಿಂದ ವೇದಿಕೆಗೆ ಬಂದು ಒಂದು ಕ್ಷಣ ಅಲ್ಲಿದ್ದವರಲ್ಲಿ ಮಿಂಚು ಹರಿಸಿದವರು ನಟ ರಮೇಶ ಅರವಿಂದ್‌.

ನಗರದ ಶ್ರೀ ಗುರು ಪಿಯು ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ‘ವ್ಯಕ್ತಿತ್ವ ವಿಕಸನ’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿವು.

ADVERTISEMENT

‘ನಾನು ನಿಮ್ಮ ವಯಸ್ಸಿನಲ್ಲಿ ಹಲೋ ಹೇಳಿದರೆ ಈ ಶಾಮಿಯಾನ ಕಿತ್ಕೊಂಡು ಹುಬ್ಬಳ್ಳಿಗೆ ಹೋಗಿ ಬೀಳುತ್ತಿತ್ತು. ನಿಮ್ಮಲ್ಲೇನೂ ಹುರುಪು ಕಾಣುತ್ತಿಲ್ವಲ್ಲ’ ಎಂದು ರಮೇಶ ಕೇಳಿದಾಗ, ‘ಹಲೋ ಸರ್‌’ ಎಂದು ದೊಡ್ಡ ಧ್ವನಿಯ ಉದ್ಗಾರ ವಿದ್ಯಾರ್ಥಿ ಸಮೂಹದಿಂದ ಕೇಳಿ ಬಂತು.

ಮಾತು ಮುಂದುವರೆಸಿ, ‘ನಿಮ್ಮ ಪ್ರೀತಿಯ ರಮೇಶನಿಂದ ಸಿನಿ ನಮಸ್ಕಾರಗಳು’ ಎಂದು ಹೇಳಿದಾಗ ವಿದ್ಯಾರ್ಥಿಗಳು ಶಿಳ್ಳೆ, ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಇದಕ್ಕೂ ಮುನ್ನ ಕಾಲೇಜಿನ ವಿದ್ಯಾರ್ಥಿಗಳು ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿದರು. ಹೂಮಳೆಗರೆದು ಬರಮಾಡಿಕೊಂಡರು. ವಿದ್ಯಾರ್ಥಿಗಳು ನೆಚ್ಚಿನ ನಟನೊಂದಿಗೆ ಕೈಕುಲುಕಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಮೇಶ, ‘ಗುರು ಕಾಲೇಜಿನ ಹಿಂದೆ ದೊಡ್ಡ ಗುಡ್ಡ (ಜೋಳದರಾಶಿ ಗುಡ್ಡ) ಇದೆ. ಎಂತಹ ಒಳ್ಳೆಯ ಸ್ಥಳದಲ್ಲಿ ಈ ಕಾಲೇಜು ಕಟ್ಟಿದ್ದಾರೆ. ಇದರಂತೆ ನಮ್ಮ ಮನಸ್ಸು, ಮೆದುಳು ವಿಶಾಲವಾಗಬೇಕು. ನಮ್ಮ ಕನಸ್ಸಿಗೆ ಮಿತಿ ಹಾಕಬಾರದು’ ಎಂದು ಸ್ಫೂರ್ತಿ ತುಂಬಿದರು.

‘ನನ್ನ ಬಗ್ಗೆ ನನಗೆ ಹೆಮ್ಮೆ ಇರಬೇಕು. ನಮ್ಮ ಹೊರಗಿನಕ್ಕಿಂತ ಒಳಗಿನ ಸತ್ವ ಮುಖ್ಯ. ಅದನ್ನು ನಾವು ನಂಬಬೇಕು.ಮೆದುಳನ್ನು ಸರಿಯಾಗಿ ಉಪಯೋಗಿಸಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅತ್ಯುತ್ತಮ ಗೆಳೆಯರು, ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಳ್ಳಬೇಕು. ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ ಪೋಷಕರು ಹುರಿದುಂಬಿಸಬೇಕು. ವಿದ್ಯಾರ್ಥಿ ಜೀವನ ಬಹಳ ಮುಖ್ಯವಾದುದು. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ನಿರ್ದೇಶಕ ರಮೇಶ ರೆಡ್ಡಿ, ನಟ ಗೌರವ್‌, ಚೈತನ್ಯ ಸಮೂಹ ಶಿಕ್ಷಣ ಸಂಸ್ಥೆ ನಿರ್ದೇಶಕ ಪಿ. ರಾಧಾಕೃಷ್ಣ, ಡೀನ್‌ ಡಿ. ಪ್ರಸನ್ನಾಂಜನೇಯಲು, ಪ್ರಾಚಾರ್ಯರಾದ ಡಿ. ವಿನೋದ್‌, ಶ್ರೀರಾಮ್‌, ಕೆ. ಪನ್ನಂಗಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.