ADVERTISEMENT

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಿ: ಡಾ. ಅಶೋಕ್‌ ದಾತಾರ್‌

ಮೊದಲ ದಿನ 38 ಅಪೌಷ್ಟಿಕ ಮಕ್ಕಳ ನೋಂದಣಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 9:42 IST
Last Updated 2 ಜುಲೈ 2021, 9:42 IST
ಹೊಸಪೇಟೆಯ ಆರೈಕೆ ಕೇಂದ್ರದಲ್ಲಿ ಮಗುವಿನ ತೂಕ, ಎತ್ತರ ಅಳತೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತೆಯರು
ಹೊಸಪೇಟೆಯ ಆರೈಕೆ ಕೇಂದ್ರದಲ್ಲಿ ಮಗುವಿನ ತೂಕ, ಎತ್ತರ ಅಳತೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತೆಯರು   

ಹೊಸಪೇಟೆ(ವಿಜಯನಗರ): ‘ಕೋವಿಡ್‌ನಿಂದ ಸಾವನ್ನಪ್ಪಿದವರಲ್ಲಿ ಮಕ್ಕಳ ಪ್ರಮಾಣ ಬಹಳ ಕಡಿಮೆ ಇದೆ. ಪೌಷ್ಟಿಕ ಆಹಾರ ಸೇವನೆಯಿಂದ ಎಲ್ಲ ರೋಗಗಳಿಂದ ರಕ್ಷಿಸಿಕೊಳ್ಳಲು ಸಾಧ್ಯ. ಅದಕ್ಕಾಗಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಾಯಂದಿರು ವಿಶೇಷ ಗಮನ ಹರಿಸಬೇಕು’ ಎಂದು ಮಕ್ಕಳ ತಜ್ಞ ಡಾ. ಅಶೋಕ್‌ ದಾತಾರ್‌ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಸಂಡೂರು ರಸ್ತೆ ವಿದ್ಯಾರ್ಥಿ ನಿಲಯದ ಆರೈಕೆ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಅಪೌಷ್ಟಿಕ ಮಕ್ಕಳ ಎರಡನೇ ತಂಡದ ಬಾಲಚೈತನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಬಾಲಚೈತನ್ಯ ಕಾರ್ಯಕ್ರಮದಿಂದ ಅನೇಕ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಉಂಟಾಗಿದೆ. ಅದನ್ನು ನೋಡಿ ಇತರೆ ತಾಯಂದಿರು ಮಕ್ಕಳನ್ನು ಕೇಂದ್ರಕ್ಕೆ ಕರೆದುಕೊಂಡು ಬರುತ್ತಿರುವುದು ಸಂತೋಷದ ವಿಚಾರ. ಮಕ್ಕಳಿಗೆ ಯಾವ ರೀತಿಯ ಪೌಷ್ಟಿಕ ಆಹಾರ ನೀಡಬೇಕು ಎಂಬ ಅರಿವು ತಾಯಂದಿಯರಲ್ಲಿ ಬಂದಿದೆ. ಎರಡನೇ ತಂಡದ ತಾಯಂದಿರಿಗೂ ಅದರ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು’ ಎಂದು ಹೇಳಿದರು.

ADVERTISEMENT

ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್, ‘ಪ್ರತಿ ತಾಯಿಯು ಪೌಷ್ಟಿಕ ಆಹಾರವನ್ನು ಸೇವಿಸಿದಾಗ ಮಗುವಿನ ಬೆಳವಣಿಗೆಯೂ ಉತ್ತಮವಾಗಿ ಆಗುತ್ತದೆ. 14 ದಿನ ನಡೆಯಲಿರುವ ಬಾಲಚೈತನ್ಯ ಕಾರ್ಯಕ್ರಮದಲ್ಲಿ ಸೂಕ್ತ ಮಾಹಿತಿ ಪಡೆದು, ಮನೆಯಲ್ಲೇ ಅದೇ ರೀತಿ ನಡೆದುಕೊಳ್ಳಬೇಕು. ಆರೈಕೆ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡ ಮಕ್ಕಳಿಗೆ ಸಚಿವರು ವೈಯಕ್ತಿಕವಾಗಿ ₹25 ಸಾವಿರ ಮೊತ್ತದ ಪೌಷ್ಟಿಕ ಆಹಾರದ ಕಿಟ್‌ ವಿತರಿಸಲು ನಿರ್ಧರಿಸಿದ್ದಾರೆ’ ಎಂದರು.

‘ಆರೈಕೆ ಕೇಂದ್ರದಲ್ಲಿ ಮಕ್ಕಳ ವಯಸ್ಸು, ತೂಕ, ಎತ್ತರಕ್ಕೆ ಅನುಗುಣವಾಗಿ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತದೆ. ಪ್ರತಿದಿನ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಬಾರಿ ಕಂಪ್ಲಿ ತಾಲ್ಲೂಕಿನಿಂದಲೂ ಮಕ್ಕಳು ಆರೈಕೆ ಕೇಂದ್ರಕ್ಕೆ ಬಂದಿದ್ದಾರೆ. ಒಟ್ಟು 38 ಮಕ್ಕಳು ನೋಂದಣಿಯಾಗಿದ್ದಾರೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ್‌ ತಿಳಿಸಿದರು.

ಆರೋಗ್ಯ ಇಲಾಖೆಯ ಡಾ.ನಾಗೇಂದ್ರ, ಡಾ.ಶ್ರೀನಿವಾಸ್, ಮಕ್ಕಳ ತಜ್ಞರ ಸಮಿತಿಯ ಡಾ.ರಾಜೀವ್, ಡಾ.ದೀಪಾ, ಇಲಾಖೆಯ ತಾಲ್ಲೂಕು ಸಂಯೋಜಕ ನೀಲಕಂಠ, ರಾಘವೇಂದ್ರ, ಫಾತೀಮಾ, ಕೆ.ನಾಗರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.