ಹೊಸಪೇಟೆ (ವಿಜಯನಗರ): ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ ನೇತೃತ್ವದಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ತಹಶೀಲ್ದಾರ್ ಕಚೇರಿ ವರೆಗೆ ರ್ಯಾಲಿ ನಡೆಸಿದರು. ಅಂತಿಮ ಯಾತ್ರೆಯಲ್ಲಿ ಪಾರ್ಥಿವ ಶರೀರ ಕೊಂಡೊಯ್ಯುವ ರೀತಿಯಲ್ಲಿ ಸಿಲಿಂಡರ್ಗೆ ಹಾರ ಹಾಕಿ ಅದನ್ನು ತಲೆ ಮೇಲೆ ಹೊತ್ತುಕೊಂಡು ಅಣಕು ಪ್ರತಿಭಟನೆ ನಡೆಸಿದರು. ಬಳಿಕ ಸಿಲಿಂಡರ್ಗೆ ಶವದಂತೆ ಅಡ್ಡ ಇಟ್ಟು ಅದಕ್ಕೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ರಸ್ತೆಯ ಮೇಲೆ ಒಲೆ ತಯಾರಿಸಿ, ಚಪಾತಿ ಮಾಡಿದರು.
ಪುಷ್ಪ ಅಮರನಾಥ ಮಾತನಾಡಿ, ‘ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಪ್ರತಿ ಸಿಲಿಂಡರ್ ಬೆಲೆ ₹300 ಇತ್ತು. ಅದನ್ನು ವಿರೋಧಿಸಿ ಬಿಜೆಪಿ ನಾಯಕರು ಹೋರಾಟ ಮಾಡಿದ್ದರು. ಈಗ ಸಿಲಿಂಡರ್ ದರ ₹900 ದಾಟಿದೆ. ಬುಧವಾರ ಪುನಃ ₹25 ಹೆಚ್ಚಾಗಿದೆ. ಹೀಗಿದ್ದರೂ ಬಿಜೆಪಿ ನಾಯಕರೇಕೇ ಮೌನ ವಹಿಸಿದ್ದಾರೆ’ ಎಂದು ಪ್ರಶ್ನಿಸಿದರು.
‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಆಹಾರ ಧಾನ್ಯ, ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳು, ಸಿಲಿಂಡರ್ ದರ ಗಗನಕ್ಕೆ ಏರಿದೆ. ಮತ್ತೊಂದೆಡೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಕಾರ್ಪೊರೇಟ್ನವರಿಗೆ ಮಾರಾಟ ಮಾಡಲಾಗುತ್ತಿದೆ. ದೇಶ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಎಂದು ನೋಡಿರಲಿಲ್ಲ’ ಎಂದು ಟೀಕಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾಲತಾ, ಮುನ್ನಿ ಕಾಸಿಂ, ಬಾನು ಬಿ, ರಂಗಮ್ಮ, ಗೀತಾ ತಿಮ್ಮಪ್ಪ, ಇಂದುಮತಿ, ಗಂಗಮ್ಮ, ಕೆ. ಮಂಜುಳಾ, ಪಲ್ಲವಿ, ಮಹಾಂಕಾಳಮ್ಮ, ಗೌಸಿಯಾ, ಅಮೀನಾ ಬಿ, ನಾಗುಬಾಯಿ, ನವಾಜ್, ಅಣ್ಣಾಮಲೈ, ಗಣೇಶ್, ಬುಡೇನ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ, ಗುಜ್ಜಲ್ ರಘು, ದೀಪಕ್ ಸಿಂಗ್, ಎಲ್. ತೇಜಾ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.