ಹೊಸಪೇಟೆ (ವಿಜಯನಗರ): ಕೊರೊನಾ ನಿಯಂತ್ರಣಕ್ಕೆ ಹೇರಲಾಗಿರುವ ವಾರಾಂತ್ಯದ ಕರ್ಫ್ಯೂ ನಗರದಲ್ಲಿ ಹೆಸರಿಗಷ್ಟೇ ಸೀಮಿತವಾಗಿದೆ.
ಯಾವುದೇ ಅಡೆತಡೆಯಿಲ್ಲದೆ ಜನ ನಗರದ ತುಂಬೆಲ್ಲ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಅವರನ್ನು ಯಾರೊಬ್ಬರೂ ಕೇಳುವವರು ಇಲ್ಲದಂತಾಗಿದೆ.
ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಆಯಾ ಬಡಾವಣೆಗಳಲ್ಲಿ ಸುತ್ತಾಡಿ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ವ್ಯಾಪಾರಿಗಳು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿಯೇ ನಿಂತುಕೊಂಡು, ಜನರನ್ನು ಸೇರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಅಂತರ ಕಾಯ್ದುಕೊಳ್ಳದೇ ವ್ಯವಹರಿಸುತ್ತಿದ್ದಾರೆ.
ಶುಕ್ರವಾರ ಸಂಜೆಯಿಂದಲೇ ವಾರಾಂತ್ಯದ ಕರ್ಫ್ಯೂ ಜಾರಿಗೆ ಬಂದಿದೆ. ಆದರೆ, ಶನಿವಾರ ದಿನವಿಡೀ ಎಲ್ಲೆಡೆ ಜನರ ಓಡಾಟ ಹೆಚ್ಚಿತ್ತು. ಭಾನುವಾರವೂ ಅದೇ ಪರಿಸ್ಥಿತಿ ಇದೆ. ಹೆಚ್ಚಿನವರು ನಗರದಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಎಲ್ಲೆಡೆ ಓಡಾಡಿದರು. ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆಯಿದ್ದರೂ ಸಹ ಜನ ಅದನ್ನು ಲೆಕ್ಕಿಸದೆ ಹೊರಗೆ ತಿರುಗಾಡಿದರು. ಈ ರೀತಿ ಹೆಸರಿಗಷ್ಟೇ ವೀಕೆಂಡ್ ಕರ್ಫ್ಯೂ ಮಾಡುವುದರ ಬದಲು ಅದನ್ನು ತೆಗೆಯುವುದೇ ಉತ್ತಮ ಎನ್ನುತ್ತಾರೆ ಸಾರ್ವಜನಿಕರು.
‘ಶನಿವಾರ, ಭಾನುವಾರ ಕರ್ಫ್ಯೂ ಎಂದು ಘೋಷಿಸಿ, ಜನರಿಗೆ ಬೇಕಾಬಿಟ್ಟಿ ಸಂಚರಿಸಲು ಬಿಟ್ಟರೆ ಏನು ಪ್ರಯೋಜನ. ಅದರ ಬದಲು ತೆಗೆದು ಹಾಕುವುದು ಉತ್ತಮ. ವ್ಯಾಪಾರಿಗಳಿಗಾದರೂ ಅನುಕೂಲವಾಗುತ್ತದೆ’ ಎಂದು ಸ್ಥಳೀಯ ನಿವಾಸಿಗಳಾದ ಬಸವರಾಜ, ಹುಲುಗಪ್ಪ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.