ADVERTISEMENT

ವೋಟಿಗೆ ₹ 500 ಪಡೆದೆ: ಗ್ರಾಮಸ್ಥನ ಮಾತು ಕೇಳಿ ಅವಕ್ಕಾದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 12:55 IST
Last Updated 20 ಫೆಬ್ರುವರಿ 2021, 12:55 IST
ತಿಮ್ಮಲಾಪುರದ ಗಾಳೆಪ್ಪ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ
ತಿಮ್ಮಲಾಪುರದ ಗಾಳೆಪ್ಪ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ   

ತಿಮ್ಮಲಾಪುರ (ವಿಜಯನಗರ/ಹೊಸಪೇಟೆ): 'ಎಲೆಕ್ಷನ್ ನಲ್ಲಿ ವೋಟಿಗೆ ₹500 ಪಡೆದೆ'
ಹೀಗೆ ಗ್ರಾಮದ ಗಾಳೆಪ್ಪ ಎನ್ನುವ ವ್ತಕ್ತಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ಹೇಳಿದಾಗ ಕ್ಷಣಕಾಲ ಅವಕ್ಕಾದರು.

ಗ್ರಾಮ ವಾಸ್ತವ್ಯದ ನಿಮಿತ್ತ ಜಿಲ್ಲಾಧಿಕಾರಿ ಶನಿವಾರ ಗ್ರಾಮದಲ್ಲಿ ಕಾಲ್ನಡಿಗೆಯಲ್ಲಿ ಓಡಾಡುತ್ತ ಗ್ರಾಮಸ್ಥರ ಅಹವಾಲು ಆಲಿಸಿದರು. ಈ ವೇಳೆ ಗಾಳೆಪ್ಪ ಎನ್ನುವ ವ್ಯಕ್ತಿ, 'ನಾವು ಮನೆ ಮಂದಿಯೆಲ್ಲ ಅನೇಕ ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದೇವೆ. ಪಂಚಾಯಿತಿಗೆ ಅರ್ಜಿ ಕೊಟ್ಟು ಸಾಕಾಗಿದೆ. ಸರ್ಕಾರದ ಯಾವುದೇ ಸೌಲಭ್ಯಗಳು ನಮ್ಮಂತಹ ಬಡವರಿಗೆ ಸಿಗುತ್ತಿಲ್ಲ' ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, 'ಚುನಾವಣೆಯಲ್ಲಿ ಎಷ್ಷು ಹಣ ತೆಗೆದುಕೊಂಡಿದ್ದೀರಿ' ಎಂದು ಪ್ರಶ್ನಿಸಿದರು. ಅದಕ್ಕೆ ಗಾಳೆಪ್ಪ ಕ್ಷಣಕಾಲವೂ ಯೋಚಿಸಿದೆ, 'ಸಾಮಿ ವೋಟಿಗೆ ₹500 ಪಡೆದೆ' ಎಂದರು. ಅದಕ್ಕೆ ಅವಕ್ಕಾದ ಡಿಸಿ, 'ದುಡ್ಡಿಗಾಗಿ ವೋಟು ಮಾರಿಕೊಂಡರೆ ಈ ರೀತಿ ಕಷ್ಟ ಅನುಭವಿಸಬೇಕಾಗುತ್ತದೆ' ಎಂದು ಹೇಳಿದರು. 'ಇಲ್ಲ ಸಾಮಿ ಮುಂದೆ ಈ ರೀತಿ ಮಾಡೊಲ್ಲ' ಎಂದು ಗಾಳೆಪ್ಪ ಹೇಳಿದರು. ಅದಕ್ಕೆ ಡಿಸಿ, 'ಶೀಘ್ರ ಸರ್ಕಾರದಿಂದ ಮನೆ ಮಂಜೂರು ಮಾಡಿಕೊಡಲು ಪ್ರಯತ್ನಿಸುತ್ತೇನೆ' ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.