
ಹೊಸಪೇಟೆ (ವಿಜಯನಗರ): ಇಲ್ಲಿಗೆ ಸಮೀಪದ ತುಂಗಭದ್ರಾ ಅಣೆಕಟ್ಟೆಯಲ್ಲಿ ಹೊಸ ಕ್ರೆಸ್ಟ್ಗೇಟ್ ಅಳವಡಿಕೆ ಕೆಲಸ ಇದೀಗ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾರರಸ ಮಾಲಿ ಪಾಟೀಲ್ ಹಾಗೂ ಇತರರು ಸೋಮವಾರ ಅಣೆಕಟ್ಟೆ ಸಮೀಪಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಆದರೆ ರೈತ ಮುಖಂಡರಿಗೆ ಅಣೆಕಟ್ಟೆಯ ಒಳಗೆ ತೆರಳಿ ಪ್ರತಿಯೊಂದು ಕ್ರೆಸ್ಟ್ಗೇಟ್ ಸಮೀಪ ನಡೆಯುತ್ತಿರುವ ಅಳವಡಿಕೆ ಕಾಮಗಾರಿ ಪರಿಶೀಲಿಸಲು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಅವಕಾಶ ನೀಡಲಿಲ್ಲ.
‘ಸದ್ಯ ಬೃಹತ್ ಯಂತ್ರಗಳ ಮೂಲಕ ವಿವಿಧ ಗೇಟ್ಗಳ ಸಮೀಪ ಅಳವಡಿಕೆ ಕೆಲಸ ನಡೆಯುತ್ತಿದೆ. ಈ ಹಂತದಲ್ಲಿ ಅಲ್ಲಿಗೆ ತೆರಳುವುದು ಅಪಾಯಕಾರಿ ಎಂಬ ಕಾರಣಕ್ಕೆ ಅಣೆಕಟ್ಟೆಯ ಒಳಗಡೆ ಯಾರನ್ನೂ ಬಿಟ್ಟಿಲ್ಲ. ರೈತ ಮುಖಂಡರಿಗೆ ಪಕ್ಕದಲ್ಲಿ ನಡೆಯುತ್ತಿರುವ ಗೇಟ್ಗಳ ರಚನೆ, ಸಿದ್ಧತಾ ಕೆಲಸಗಳನ್ನು ಹಾಗೂ ತುಂಗಭದ್ರಾ ಮಂಡಳಿ ಕಚೇರಿ ಸಮೀಪದ ಗೇಟ್ ರಚನೆ ಕೆಲಸ ನೋಡಿಕೊಂಡು ಬರಲು ಅವಕಾಶ ನೀಡಲಾಗಿದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
‘33 ಗೇಟ್ಗಳ ಪೈಕಿ ಸದ್ಯ 11 ಕ್ರೆಸ್ಟ್ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಮಂಗಳವಾರ 12ನೇ ಗೇಟ್ನಲ್ಲಿ ಸಹ ಅಳವಡಿಕೆ ಪೂರ್ಣಗೊಳ್ಳಲಿದೆ. ಕೆಲಸ ಭರದಿಂದ ಸಾಗಿದೆ. ನಿಗದಿತ ಸಮಯದೊಗೆ ಕಾಮಗಾರಿ ಮುಕ್ತಾಯಗೊಳ್ಳುವ ವಿಶ್ವಾಸ ಇದೆ’ ಎಂದು ಅವರು ಹೇಳಿದರು.
ರೈತ ಮುಖಂಡರ ನಿಯೋಗದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ಎಂ.ಎಲ್.ಕೆ.ನಾಯ್ಡು, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಗಂಟೆ ಸೋಮಶೇಖರ್, ಬಾಗಲಕೋಟೆ ಜಿಲ್ಲೆಯ ರಾಜೇಂದ್ರ ಪಾಟೀಲ್, ಡಿ.ಎಂ.ನದಾಫ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.