ಕೂಡ್ಲಿಗಿ (ವಿಜಯನಗರ ಜಿಲ್ಲೆ): ‘ಶ್ರೀರಾಮುಲು ಎಲ್ಲಾ ಕಡೆ ಪಕ್ಷ ಸಂಘಟನೆ ಮಾಡಲಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ’ ಎಂದು ಬಿಜೆಪಿ ಮುಖಂಡ ರಾಮದುರ್ಗದ ಸೂರ್ಯಪಾಪಣ್ಣ ಹೇಳುವ ಮೂಲಕ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಶ್ರೀರಾಮುಲು ಅವರ ವರ್ತನೆಗೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ಪಟ್ಟಣದಿಂದ ಶುಕ್ರವಾರ ರಾತ್ರಿ ಪಾದಯಾತ್ರೆ ಕೈಗೊಳ್ಳುವ ಮುನ್ನ ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ‘2018ರಿಂದಲೂ ನಾವು ಸ್ಥಳೀಯರಿಗೇ ಟಿಕೆಟ್ ನೀಡಬೇಕು ಎಂದು ಪ್ರತಿಪಾದಿಸುತ್ತ ಬಂದಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಃ ಶ್ರೀರಾಮುಲು ಅವರೇ ಸ್ಥಳೀಯರಿಗೆ ಟಿಕೆಟ್ ನೀಡಲಾಗುವುದು ಎಂದಿದ್ದಾರೆ. ಅದಂತೆ ನಡೆದುಕೊಳ್ಳಲಿ’ ಎಂದರು.
‘ಕೂಡ್ಲಿಗಿ ಕ್ಷೇತ್ರದ ಸಮಸ್ತ ರೈತರ ಏಳ್ಗೆಗಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಸಂಕಲ್ಪ ಮಾಡಿದ್ದೇವೆ. ನಮ್ಮ ಈ ಪಾದಯಾತ್ರೆಯಲ್ಲಿ ಯಾವ ಬಣವೂ ಇಲ್ಲ. ಶ್ರೀರಾಮುಲು ನಮ್ಮ ಪಕ್ಷದ ಹಿರಿಯ ಮುಖಂಡರು, ಅವರ ಬಗ್ಗೆ ಗೌರವವಿದೆ’ ಎಂದರು. ಶ್ರೀರಾಮುಲು ಅವರು ಪ್ರತ್ಯೇಕವಾಗಿ ಕೊಟ್ಟೂರಿಗೆ ಪಾದಯಾತ್ರೆ ಕೈಗೊಂಡಿದ್ದ ಕಾರಣ ಪಕ್ಷದಲ್ಲಿ ಬಣ ರಾಜಕೀಯ ಇದೆ ಎಂಬ ಗುಸುಗುಸು ಸೃಷ್ಟಿಯಾಗಿದ್ದರಿಂದ ಅವರು ಈ ಹೇಳಿಕೆ ನೀಡಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಸ್ಥಗಿತಗೊಂಡಿದೆ. ಇನ್ನು ಸ್ವಲ್ಪ ದಿನ ಕಾದು ಹೋರಾಟ ರೂಪಿಸಲಾಗುವುದು’ ಎಂದರು.
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತು, ಮಂಡಲ ಅಧ್ಯಕ್ಷ ಕೆ.ನಾಗರಾಜ, ಪ್ರಧಾನ ಕಾರ್ಯದರ್ಶಿ ಪಿ. ಮಂಜುನಾಥ ನಾಯಕ, ಮುಖಂಡರಾದ ಕೆ.ಎಚ್. ವೀರನಗೌಡ, ಗುಳಿಗಿ ವೀರೇಂದ್ರ, ಜೋಗಿಹಳ್ಳಿ ನಾಗಣ್ಣ, ಸಿ.ಬಿ. ಗುರು, ರಾಘವೇಂದ್ರ, ಬಾಣದ ಶಂಕರ್, ಕೊಟ್ರೇಶ್, ಶಂಭಯ್ಯ, ಶರಣಗೌಡ, ಪತ್ರೆಪ್ಪ, ಹೂಡೇಂ ಮಂಜುನಾಥ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.