ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಗೋಪುರಕ್ಕೆ ನೂತನವಾಗಿ ಸಿದ್ಧಗೊಂಡಿರುವ 9.6 ಅಡಿ ಎತ್ತರದ ತಾಮ್ರದ ಕಳಸಕ್ಕೆ ಬಂಗಾರದ ಲೇಪನ ಮಾಡಿಸಿ ನಂತರ ಕಳಸಾರೋಹಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಮಾತನಾಡಿದ ಅವರು, ‘ಶೀಘ್ರದಲ್ಲಿಯೇ ಭಕ್ತರಿಂದ 1 ಕೆ.ಜಿ. ಬಂಗಾರ ಸಂಗ್ರಹಿಸಿ ಕಳಸದ ಲೇಪನ ಮಾಡಿಸಲು ಸಿದ್ಧತೆ ಕೈಗೊಳ್ಳಲಾಗುವುದು’ ಎಂದರು.
ನಂತರ ತಾಲ್ಲೂಕಿನ ಚಿರಿಬಿ ಗ್ರಾಮದ ಹೊರವಲಯದಲ್ಲಿರುವ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು ಹದ್ದುಬಸ್ತು ಮಾಡಿ, ಬರುವ ಭಕ್ತರಿಗೆ ಮೂಲ ಸೌಕರ್ಯ ಹಾಗೂ ಅಮಾವಾಸ್ಯೆಯಂದು ಪ್ರಸಾದ ವ್ಯವಸ್ಥೆ ಕಲ್ಪಿಸುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರಿಗೆ ಸೂಚಿಸಿದರು.
‘ಮೂಗಬಸವೇಶ್ವರ ದೇವಸ್ಥಾನವು ಧಾರ್ಮಿಕ ಇಲಾಖೆಯ ಅಧೀನದಲ್ಲಿರುವುದರಿಂದ ರಥೋತ್ಸವದ ಬಗ್ಗೆ ರಾಂಪುರ ಹಾಗೂ ಚಿರಿಬಿ ಗ್ರಾಮಸ್ಥರು ಹಸ್ತಕ್ಷೇಪ ಮಾಡುವಂತಿಲ್ಲ’ ಎಂದರು.
ಎರಡು ಗ್ರಾಮಸ್ಥರು ಸಹಕರಿಸಿದರೆ ಈ ವರ್ಷ ರಥೋತ್ಸವ ಜರುಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮುಖಂಡರಾದ ಬಿ.ಸಿ. ಮೂಗಪ್ಪ, ಎಂ.ಎಂ.ಜೆ. ಮೂಗಣ್ಣ, ಎಂ.ಎಂ.ಜೆ. ಸ್ವತಂತ್ರ, ಚಿರಿಬಿ ವೀರಯ್ಯ, ಗಂಗಾಧರ್, ನಾಗಭೂಷಣ್, ಅಂಗಡಿ ಮಂಜುನಾಥ್, ರಾಂಪುರ ಭರಮಪ್ಪ, ಬಸವನಗೌಡ, ಮದ್ಯಾನಪ್ಪ, ನಾಗಭೂಷಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.