
ಸಿರುಗುಪ್ಪ: ತಾಲ್ಲೂಕಿನ ಹಚ್ಚೋಳ್ಳಿ ಹೋಬಳಿಯ ಬೊಮ್ಮಲಪುರ ಗ್ರಾಮದ ಸುತ್ತಲಿನ 350 ಎಕರೆ ಹುಲ್ಲುಗಾವಲು ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಪ್ರಭೇದ ಆವಾಸಸ್ಥಾನ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಹಶೀಲ್ದಾರ್ ಗೌಸಿಯಾ ಬೇಗಂ ಹೇಳಿದರು.
ತಾಲ್ಲೂಕಿನ ಬೊಮ್ಮಲಪುರ ಗ್ರಾಮದಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್(ಎರೆಭೂತ) ಪಕ್ಷಿ ಪ್ರಭೇದ ವೀಕ್ಷಣಾ ಕೇಂದ್ರಕ್ಕೆ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಮತ್ತು ಅದರ ಆವಾಸ ಸ್ಥಾನ ಸಂರಕ್ಷಣ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮಿತಿಯು ಕಳ್ಳಬೇಟೆ ತಡೆ ಮತ್ತು ಅರಿವಿನ ಜಾಗೃತಿ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದರು.
ಇಂತಹ ಅಪರೂಪದ ಪಕ್ಷಿ ಪ್ರಭೇದ ಕರ್ನಾಟಕದ ಬಳ್ಳಾರಿ ಜಿಲ್ಲೆಯ ನಮ್ಮ ತಾಲ್ಲೂಕಿನಲ್ಲಿ ವಾಸ ಕಂಡು ಬಂದಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ಎಲ್ಲರೂ ಈ ಪ್ರಭೇದದ ಅವಾಸ ಸ್ಥಾನ ರಕ್ಷಿಸಬೇಕೆಂದು ತಿಳಿಸಿದರು.
ಅರಣ್ಯ ಇಲಾಖೆಯ ಆರ್ಎಫ್ಒ ನಾಗರಾಜ ಗ್ರೇಟ್ ಇಂಡಿಯನ್ ಬಸ್ಟರ್ಡ್(ಎರೆಭೂತ) ಪಕ್ಷಿ ಪ್ರಭೇದ ವೀಕ್ಷಣಾ ಕೇಂದ್ರದಲ್ಲಿ ಅದರ ವಿಶೇಷತೆಯನ್ನು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಇ.ಒ. ಪವನ ಕುಮಾರ್, ನಗರಸಭೆ ಪೌರಾಯುಕ್ತ ಗಂಗಾಧರ್, ಬಿಸಿಎಂ ಇಲಾಖೆಯ ಎ.ಡಿ ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ, ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.