ಹೊಸಪೇಟೆ (ವಿಜಯನಗರ): ಫೆಲೋಶಿಪ್ ಬಿಡುಗಡೆಗೆ ಆಗ್ರಹಿಸಿ ಹಂಪಿ ಕನ್ನಡ ವಿಶ್ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ವಿ.ವಿ. ಕ್ರಿಯಾಶಕ್ತಿ ಭವನದ ಎದುರು ಭಾನುವಾರ ಅಹೋರಾತ್ರಿ ಧರಣಿ ನಡೆಸಿದರು.
ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಡಬೇಕೆಂದು ಸರ್ಕಾರ ಆದೇಶಿಸಿದೆ.
₹11.89 ಕೋಟಿ ಹಣ ಮಂಜೂರು ಮಾಡಿದೆ. ಹೀಗಿದ್ದರೂ ಫೆಲೋಶಿಪ್ ಕೊಡದೇ ಸತಾಯಿಸುತ್ತಿರುವುದು ಸರಿಯಲ್ಲ. 47 ತಿಂಗಳಿಂದ ಫೆಲೋಶಿಪ್ ಕೊಡದ ಕಾರಣ ಸಂಶೋಧನಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕೊಡಲಿ ಏಟು ಬಿದ್ದಿದೆ ಎಂದು ಹೇಳಿದರು.
ಸರ್ಕಾರದ ಸೂಚನೆ ಪ್ರಕಾರ, ಕೂಡಲೇ ಫೆಲೋಶಿಪ್ ಬಿಡುಗಡೆಗೊಳಿಸಬೇಕು. ಫೆಲೋಶಿಪ್ ಕೊಡದ ಕಾರಣ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬಡ ಸಂಶೋಧನಾ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಪ್ರೋತ್ಸಾಹಧನ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ವಿವಿಧ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು. ಡಿಸೆಂಬರ್ 8ರಂದು ಕನ್ನಡ ವಿ.ವಿ. ನುಡಿಹಬ್ಬ ನಿಗದಿಯಾಗಿದೆ. ಒಂದೆಡೆ ವಿ.ವಿ. ಆಡಳಿತ ನುಡಿಹಬ್ಬದ ಸಿದ್ಧತೆಯಲ್ಲಿದ್ದರೆ ಇನ್ನೊಂದೆಡೆ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.