ADVERTISEMENT

ಹಂಪಿಗೆ ಪ್ರವಾಸ ಬಂದಿದ್ದ ಮಹಾರಾಷ್ಟ್ರದ ಪ್ರವಾಸಿಗ ನಾಪತ್ತೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 11:12 IST
Last Updated 26 ಅಕ್ಟೋಬರ್ 2025, 11:12 IST
   

ಹೊಪಸೇಟೆ (ವಿಜಯನಗರ): ಮಹಾರಾಷ್ಟ್ರದ ಕೊಲ್ಲಾಪುರದಿಂದ ಹಂಪಿಗೆ ಪ್ರವಾಸ ಬಂದಿದ್ದ ಕುಟುಂಬವೊಂದರ ಸದಸ್ಯ, 20 ವರ್ಷದ ಆದಿತ್ಯ ಕುಮಾರ ಪ್ರಜಾಪತಿ ಎಂಬಾತ ಎರಡು ದಿನಗಳಿಂದ ನಾಪತ್ತೆಯಾಗಿರುವ ಕುರಿತು ಹಂಪಿ ಪ್ರವಾಸಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಹಂಪಿಯ ವರಾಹ ದೇವಸ್ಥಾನದ ಹತ್ತಿರ ಮಧ್ಯಾಹ್ನ ಆದಿತ್ಯ ಕುಮಾರ ನಾಪತ್ತೆಯಾಗಿದ್ದಾನೆ, ಆತನಿಗಾಗಿ ರಾತ್ರಿ ಹೋಂ ಸ್ಟೇನಲ್ಲಿ ಕಾಯ್ದು ಕುಳಿತು, ಸಂಬಂಧಿಕರಲ್ಲಿ ಮಾಹಿತಿ ಕೇಳಿದ ಬಳಿಕವೂ ಆತನ ಸುಳಿವಿಲ್ಲ. ಹೀಗಾಗಿ ಠಾಣೆಗೆ ದೂರು ನೀಡಲಾಗುತ್ತಿದೆ ಎಂದು ಯುವಕನ ತಂದೆ ಕ್ಯಾಲಿಕುಮಾರ ಪ್ರಜಾಪತಿ ಅವರು ಶನಿವಾರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘24ರಂದು ಸುಗ್ರೀವ ಗುಹೆ ನೋಡಿಕೊಂಡು ಹಿಂದುಗಡೆ ಇರುವ ಕೋಟಿಲಿಂಗ ದೇವಸ್ಥಾನವನ್ನು ನೋಡುತ್ತಿರುವಾಗ ಆದಿತ್ಯ ತುಂಗಭದ್ರಾ ನದಿ ನೀರಿಗೆ ಇಳಿದಿದ್ದ. ಈಜು ಬಾರದ ಅವನಿಗೆ ಬುದ್ಧಿವಾದ ಹೇಳಿ ಮೇಲಕ್ಕೆ ಕರೆತರಲಾಗಿತ್ತು. ವರಾಹ ದೇವಸ್ಥಾನ ನೋಡಲು ನಾವೆಲ್ಲ ಒಟ್ಟಾಗಿ ಹೋಗಿದ್ದೆವು. ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಾಗ ಕುಡಿಯುವ ನೀರು ತರಲು ಆದಿತ್ಯ ತೆರಳಿದ. ಆತ ತನ್ನ ಮೊಬೈಲ್‌ ಅನ್ನು ಅವನ ಅಮ್ಮನಿಗೆ ಕೊಟ್ಟು ಹೋಗಿದ್ದ. ನೀರಿಗೆಂದು ಹೋದವನು ಮತ್ತೆ ಬರಲಿಲ್ಲ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ADVERTISEMENT

ನಾಪತ್ತೆಯಾಗಿರುವ ಯುವಕನಿಗಾಗಿ ಹುಡುಕಾಟ ನಡೆಯುತ್ತಿದೆ. ಭಾನುವಾರ ಸಂಜೆಯವರೆಗೂ ಆತನ ಸುಳಿವು ಸಿಕ್ಕಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.