
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಕೊನೆಯ ದಿನವಾದ ಭಾನುವಾರ ಹಲವು ಸೆಲೆಬ್ರೆಟಿ ಕಲಾವಿದರು, ಗಾಯಕರು ಎಂ.ಪಿ.ಪ್ರಕಾಶ್ ವೇದಿಕೆಗೆ ಬಂದು ಜನರನ್ನು ರಂಜಿಸಿದರು. ನಟರಾದ ಡಾಲಿ ಧನಂಜಯ, ಧ್ರುವ ಸರ್ಜಾ, ರಚಿತಾ ರಾಮ್ ಅವರ ಸಂಭ್ರಮದಲ್ಲಿ ಜನ ಪಾಲ್ಗೊಂಡರೆ, ಮಣಿಕಾಂತ್ ಕದ್ರಿ ಅವರ ಗಾನ ಸುಧೆಯಲ್ಲಿ ಜನ ಮಿಂದೆದ್ದರು.
ವಂದೇ ಮಾತರಂ ಗೀತೆಯನ್ನು ವಾದ್ಯದ ಮೂಲಕ ನುಡಿಸುತ್ತಾ ವೇದಿಕೆಗೆ ಆಗಮಿಸಿದ ಮಣಿಕಾಂತ್ ಕದ್ರಿ, ಪೃಥ್ವಿ ಚಲನಚಿತ್ರದ ‘ಹೆಜ್ಜೆಗೊಂದು ಹೆಜ್ಜೆ’ ಆರಂಭದಲ್ಲಿ ಹಾಡಿದರು. ‘ಕರುನಾಡ ತಾಯಿ ಸದಾ ಚಿನ್ಮಯಿ’ ಹಾಡಿಗೆ ಧ್ವನಿಯಾದರು. ಶಾಸಕಿ ಲತಾ ಮಲ್ಲಿಕಾರ್ಜುನ ಮತ್ತು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿದ್ದಲ್ಲಿಗೆ ತೆರಳಿ ಅವರೂ ಧ್ವನಿಗೂಡಿಸುವಂತೆ ಮಾಡಿದರು.
ಕಾಂತಾರ ತಂಡ: ಕಾಂತಾರ ತಂಡದಿಂದ ನಡೆದ ಹಾಸ್ಯ ಪ್ರಸಂಗ ರಂಜಿಸಿತು. ಪ್ರಕಾಶ್ ತುಮಿನಾಡ್, ದೀಪಕ್ ಅವರು ಜನರನ್ನು ನಗೆಗಡಲಲ್ಲಿ ತೇಲಿಸಿದರು.
‘ಕೇಕೆ, ಶಿಳ್ಳೆಯಲ್ಲಿ ಶಿವ ಕಾಣ್ತಾನೆ.. ಬಡವರ ಮಕ್ಕಳು ಬೆಳೆಯಬೇಕು, ತಂದೆ ತಾಯಿ ಚೆನ್ನಾಗಿ ನೋಡಿಕೊಳ್ಳೋಣ. ಹಲಗಲಿ ಬೇಡರ ಸಿನೆಮಾ ಮಾಡುತ್ತಿರುವೆ, ಶೇ 40ರಷ್ಟು ಚಿತ್ರೀಕರಣ ಮುಗಿದಿದೆ’ ಎಂದು ಡಾಲಿ ಧನಂಜಯ ಹೇಳಿದರು.
ರಚಿತಾ ರಾಮ್ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಜನ ಹರ್ಷೋದ್ಗಾರ ಭುಗಿಲೆದ್ದಿತು. ಹಂಪಿಯಲ್ಲಿ ತಮ್ಮ ಸಿನಿಮಾ ಶೂಟಿಂಗ್ ಮಾಡಿದ್ದನ್ನು ತಿಳಿಸಿ, ಅದು ಯಶಸ್ವಿಯಾಗಿದ್ದನ್ನು ತಿಳಿಸಿದರು. ‘ಮೀಟ್ ಮಾಡೋಣ’ ಹಾಡಿಗೆ ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.