ADVERTISEMENT

ಹಂಪಿ ಉತ್ಸವ: ಮತ್ತೊಮ್ಮೆ ತೆರೆದುಕೊಂಡ ಜಾನಪದ ಲೋಕ

ಕೊನೆಯ ದಿನ ಪಾರಂಪರಿಕ ಬೀದಿಗಳಲ್ಲಿ ಮನಸೂರೆಗೊಂಡ ಮೆರವಣಿಗೆ

ಎ.ಎಂ.ಸೋಮಶೇಖರಯ್ಯ
Published 16 ಫೆಬ್ರುವರಿ 2026, 2:16 IST
Last Updated 16 ಫೆಬ್ರುವರಿ 2026, 2:16 IST
ಜಾನಪದ ವಾಹಿನಿಯಲ್ಲಿ ಗಮನ ಸೆಳೆದ ಬೇಡ ವೇಷಧಾರಿ ಕಲಾವಿದರು –ಪ್ರಜಾವಾಣಿ ಚಿತ್ರ/ ಎ.ಎಂ.ಸೋಮಶೇಖರಯ್ಯ
ಜಾನಪದ ವಾಹಿನಿಯಲ್ಲಿ ಗಮನ ಸೆಳೆದ ಬೇಡ ವೇಷಧಾರಿ ಕಲಾವಿದರು –ಪ್ರಜಾವಾಣಿ ಚಿತ್ರ/ ಎ.ಎಂ.ಸೋಮಶೇಖರಯ್ಯ   

ಹಂಪಿ (ವಿಜಯನಗರ): ಹಂಪಿ ಉತ್ಸವದ ಆರಂಭಕ್ಕೆ ಮೊದಲು ಹೊಸಪೇಟೆ ನಗರದಲ್ಲಿ ವಸಂತ ವೈಭವ ಮೂಲಕ ಕಂಡಿದ್ದ ಜಾನಪದ ಲೋಕ, ಉತ್ಸವದ ಕೊನೆಯ ದಿನವಾದ ಭಾನುವಾರ ಹಂಪಿಯ ಪಾರಂಪರಿಕ ಬೀದಿಗಳಲ್ಲಿ ಜಾನಪದ ವಾಹಿನಿ ಮೂಲಕ ಜನರಿಗೆ ಮತ್ತೊಮ್ಮೆ ತನ್ನ ಪರಿಚಯ ಮಾಡಿತು.

ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಕನ್ನಡ ತಾಯಿ ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಎಚ್.ಅರ್. ಗವಿಯಪ್ಪ ಜಾನಪದ ವಾಹಿನಿಗೆ ಚಾಲನೆ ನೀಡಿದರು. ಈ ವೇಳೆ ವಿರೂಪಾಕ್ಷೇಶ್ವರ ದೇವಸ್ಥಾನ ಆನೆ ಲಕ್ಷ್ಮಿ ಶಾಸಕರಿಗೆ ಹೂಮಾಲೆ ಹಾಕಿ ಶುಭ ಕೋರಿತು. ನಂತರ ಆನೆ ನೃತ್ಯ ಮಾಡುವ ಮೂಲಕ ಮೆರವಣಿಗೆ ಮುಂದೆ ಸಾಗಿತು.

ಸಮಯಕ್ಕೆ ಸರಿಯಾಗಿ ಮಧ್ಯಾಹ್ನ 3.30ಕ್ಕೆ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಯಾತ್ರೆಯಲ್ಲಿ ನಂದಿ ಧ್ವಜ, ಕೋಲು, ಸಮಾಳ, ಡೊಳ್ಳು ಕುಣಿತ, ಹಗಲು ವೇಷಗಾರರ ಪ್ರದರ್ಶನ, ಡ್ರಂ ಸೆಟ್, ಲಂಬಾಣಿ ನೃತ್ಯ, ಕಾಡ ಸಿದ್ದರು ಚಮತ್ಕಾರ, ಒನಕೆ ಓಬವ್ವನೊಂದಿಗೆ ಕಹಳೆ ಮೊಳಗಿಸುತ್ತಿದ್ದ ಕಲಾವಿದರು, ಕೊಳಲು ಊದುತ್ತ ಡಮರುಗ ಬಾರಿಸುತ್ತ ಹೆಜ್ಜೆ ಹಾಕಿದ ಗೊರವಯ್ಯಗಳು, ಸಾಹಸ ಮೆರೆಯುತ್ತಿದ್ದ ವೀರ ಬೇಡರ ಪಡೆ, ಪಕ್ಷಿಯ ಗರಿಗಳನ್ನು ಸಿಕ್ಕಿಸಿಕೊಂಡು ಗಮನ ಸೆಳೆಯುತ್ತಿದ್ದ ಹಕ್ಕಿ ಪಿಕ್ಕಿ ಬಾಲೆಯರು, ಬಾಲಕಿಯರು ಬಡಿಯುತ್ತಿದ್ದ ನಗಾರಿ, ಕೋಲಾಟ, ವೀರಗಾಸೆ ರಾಜ್ಯದ ಕಲಾ ಜಗತ್ತನ್ನು ತೋರಿಸಿಕೊಟ್ಟವು.

ADVERTISEMENT

ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಜಾನಪದ ಕಲಾವಿದರು ತಮ್ಮ ವಿಭಿನ್ನ ಕಲೆಯ ಮೂಲಕ ಹೊಸ ಲೋಕವನ್ನೇ ಸೃಷ್ಟಿಸುತ್ತ ತಾಯಿ ಭುವನೇಶ್ವರಿ ದೇವಿಯನ್ನು ಮೆರವಣಿಗೆಯಲ್ಲಿ ಸಾಗಿಸಿದರು.

ಬೀದಿಗಳ ಅಕ್ಕ ಪಕ್ಕದಲ್ಲಿ ನಿಂತಿದ್ದ ಜನ ಕಲಾವಿದರನ್ನು ಹುರಿದುಂಬಿಸಿ ಹುಮ್ಮಸ್ಸು ತುಂಬಿದರು. ಕೆಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಮೆರವಣಿಗೆ ಬಡವಿ ಲಿಂಗ, ಶ್ರೀ ಕೃಷ್ಣ ದೇವಸ್ಥಾನ, ಕಡಲೆಕಾಳು ಗಣಪ ದೇವಸ್ಥಾನದ ಮೂಲಕ ಹಾದು ರಥ ಬೀದಿಯಲ್ಲಿ ಸಾಗಿ ಶ್ರೀ ವಿರೂಪಾಕ್ಷ ದೇವಸ್ಥಾನ ಬಳಿ ಸಂಪನ್ನಗೊಂಡಿತು.

ಆರಂಭದಿಂದ ಮುಕ್ತಾಯದವರಗೆ ಮೆರವಣಿಗೆಯ ಜೊತೆಯಲ್ಲಿಯೇ ಸಾಗಿ ಬಂದ ಶಾಸಕ ಗವಿಯಪ್ಪ, ಜಿಲ್ಲಾಧಿಕಾರಿ ಕವಿತ ಎಸ್. ಮನ್ನಿಕೇರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಿರುಪಾಕ್ಷೇಶ್ವರ ದೇವಸ್ಥಾನದ ಬಳಿ ಮತ್ತೊಮ್ಮೆ ಕನ್ನಡ ತಾಯಿ ಭುವನೇಶ್ವರ ದೇವಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ.ಎಂ. ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಅವಸರ–ಪ್ರದರ್ಶನಕ್ಕೆ ತೊಡಕು

ಪೂಜೆ ಮಾಡಲು ತಡವಾಗುತ್ತದೆ ಎಂದು ಅಧಿಕಾರಿಗಳು ಕಲಾವಿದರ ತಂಡಗಳನ್ನು ಅವಸರ ಅವಸರವಾಗಿ ಮುಂದೆ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಅನೇಕ ಕಡೆ ತಮ್ಮ ಪ್ರದರ್ಶನವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ತೋರಿಸಬೇಕು ಎಂದಿದ್ದ ಕಲಾವಿದರಿಗೆ ನಿರಾಸೆಯಾಯಿತು. ಸಾಮಾನ್ಯವಾಗಿ ಒಂದೂವರೆ ಕಿ.ಮೀ.ದೂರದ ಮೆರವಣಿಗೆ ಸಾಗಲು ಸುಮಾರು ಎರಡು ಗಂಟೆ ತೆಗೆದುಕೊಳ್ಳುತ್ತಿತ್ತು. ಆದರೆ ಭಾನುವಾರ ಕೇವಲ ಮುಕ್ಕಾಲು ಗಂಟೆಯಲ್ಲಿ ಅದು ಮುಗಿದು ಹೋಯಿತು.

ಜಾನಪದ ವಾಹಿನಿಯಲ್ಲಿ ಕೈಚಳಕ ಕಲಾವಿದರ ಮೋಡಿ  –ಪ್ರಜಾವಾಣಿ ಚಿತ್ರ/ ಎ.ಎಂ.ಸೋಮಶೇಖರಯ್ಯ
ಹಂಪಿಯಲ್ಲಿ ಭಾನುವಾರ ಸಂಜೆ ಜಾನಪದ ವಾಹಿನಿಗೆ ಚಾಲನೆ ನೀಡಿದ ಶಾಸಕ ಎಚ್.ಆರ್.ಗವಿಯಪ್ಪ ಅವರು ಕಲಾವಿದರೊಂದಿಗೆ ಹೆಜ್ಜೆ ಹಾಕಿದರು  –ಪ್ರಜಾವಾಣಿ ಚಿತ್ರ/ ಲವ ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.