
ಹೊಸಪೇಟೆ (ವಿಜಯನಗರ): ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಈ ಬಾರಿ ಫೆಬ್ರುವರಿ 13ರಿಂದ 15ರವರೆಗೆ ನಡೆಸುವ ಕುರಿತು ಜಿಲ್ಲಾಡಳಿತ ಸುಳಿವು ನೀಡಿದ್ದು, ಇದುವೇ ಅಂತಿಮ ಎಂದಾದರೆ ಕೊಟ್ಟೂರು ರಥೋತ್ಸವದ ಮರುದಿನವೇ ಹಂಪಿ ಉತ್ಸವದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಕಷ್ಟವಾದೀತು ಎಂದು ಪೊಲೀಸ್ ಇಲಾಖೆ ಆತಂಕ ವ್ಯಕ್ತಪಡಿಸಿದೆ.
‘ಐದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಕೊಟ್ಟೂರು ಮಹಾರಥೋತ್ಸವ ಫೆ.12ರಂದು ನಡೆಯಲಿದೆ. ಮುಂದಿನ ಎರಡು, ಮೂರು ದಿನವೂ ಅಲ್ಲಿ ಜನಜಂಗುಳಿ ಇದ್ದೇ ಇರುತ್ತದೆ. ಪೊಲೀಸ್ ಬಂದೋಬಸ್ತ್ ಬೇಕಾಗಿರುತ್ತದೆ, ಹೀಗಿರುವಾಗ ಮರುದಿನವೇ ಹಂಪಿಗೆ ಪೊಲೀಸ್ ಪಡೆಯನ್ನು ಕಳುಹಿಸುವುದು ಕಷ್ಟ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಫೆ.15ಕ್ಕೆ ಮಹಾಶಿವರಾತ್ರಿ ಉತ್ಸವ ನಡೆಯುತ್ತದೆ. ಸಾವಿರಾರು ಭಕ್ತರು ಶಿವಾಲಯಗಳಿಗೆ ತೆರಳುತ್ತಾರೆ. ಸಹಜವಾಗಿಯೇ ಅಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಹೂವಿನಹಡಗಲಿ ತಾಲ್ಲೂಕಿನ ಕುರುವತ್ತಿಯಲ್ಲಿ ಫೆ.17ರಂದು ಬಸವೇಶ್ವರ ಮಹಾರಥೋತ್ಸವ ನಡೆಯಲಿದೆ, ಎರಡು ದಿನ ಮೊದಲಾಗಿಯೇ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ’ ಎಂದು ಅವರು ಸಮಸ್ಯೆ ತೆರೆದಿಟ್ಟರು.
ಫೆ.13ರಂದೇ ಏಕೆ?
ಹೊಸಪೇಟೆಯಲ್ಲಿ 2025ರ ಮೇ 20ರಂದು ನಡೆದ ಸಾಧನಾ ಸಮಾವೇಶದ ರೀತಿಯಲ್ಲಿ ಹಾವೇರಿಯಲ್ಲಿ ಫೆ.13ರಂದು ಲಕ್ಷ ಮಂದಿ ಪಾಲ್ಗೊಳ್ಳುವ ಸಮಾವೇಶ ನಡೆಯಲಿದೆ, ಅದಕ್ಕೆ ಮುಖ್ಯಮಂತ್ರಿ ಬರುತ್ತಾರೆ. ಹಾಗೆ ಬಂದವರು ಹೊಸಪೇಟೆಗೂ ಬಂದು ಹಂಪಿ ಉತ್ಸವ ಉದ್ಘಾಟಿಸಲಿ ಎಂಬ ಕಾರಣಕ್ಕೆ ಫೆ.13ರಂದು ಹಂಪಿ ಉತ್ಸವ ನಡೆಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಕಳೆದ ವರ್ಷ ಫೆಬ್ರುವರಿ 28ರಿಂದ ಮಾರ್ಚ್ 2ರವರೆಗೆ ಹಂಪಿ ಉತ್ಸವ ನಡೆದಿತ್ತು. 2024ರಲ್ಲಿ ಫೆಬ್ರುವರಿ ಮೊದಲ ವಾರ ಉತ್ಸವ ನಡೆದಿತ್ತು. ಬಹುತೇಕ ಹಂಪಿ ಉತ್ಸವ ನಡೆಯುವ ಹಿಂದೆ, ಮುಂದೆ ಜಿಲ್ಲೆಯಲ್ಲಿ ದೊಡ್ಡ ಮಟ್ಟಿದ ಜಾತ್ರೆ, ಉತ್ಸವಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡೇ ಹಂಪಿ ಉತ್ಸವ ನಿಗದಿಪಡಿಸಲಾಗುತ್ತಿತ್ತು. ಈ ಬಾರಿ ದಿನಾಂಕ ಬದಲಾಗದಿದ್ದರೆ ಪೊಲೀಸರಿಗೆ ಬಹಳ ಕಷ್ಟ ನಿಶ್ಚಿತ ಎಂದು ಹೇಳಲಾಗುತ್ತಿದೆ.
ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಜನವರಿ 5ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ದಿನಾಂಕ ಬದಲಾಗುವ ಸಾಧ್ಯತೆ ಇದೆ– ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.