
ಹೊಸಪೇಟೆ (ವಿಜಯನಗರ): ‘ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆಯ ಪ್ರಬಲ ಕೆಚ್ಚು ಎಲ್ಲರಲ್ಲೂ ಇತ್ತು. ಆದರೆ ನಮ್ಮ ಇತಿಹಾಸಕಾರರು ತಿರುಚಿದ ಇತಿಹಾಸವನ್ನೇ ಓದಿಕೊಳ್ಳುವಂತೆ ಮಾಡಿದರು. ಇದು ನಮ್ಮ ದೇಶಕ್ಕೆ ಇತಿಹಾಸಕಾರರು ಮಾಡಿದ ಘೋರ ಅನ್ಯಾಯ’ ಎಂದು ಗದಗ, ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದಜಿ ಮಹಾರಾಜ್ ಹೇಳಿದರು.
ನಗರದ ಅನಂತಶಯನಗುಡಿ ಸಮೀಪದ ಹಂಸಾಂಬಾ ಶಾರದಾಶ್ರಮದಲ್ಲಿ ಶನಿವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದಲ್ಲಿ ‘ಶಕ್ತಿಯ ಗಣಿ ವಿವೇಕವಾಣಿ’ ವಿಷಯದ ಕುರಿತು ಮಾತನಾಡಿದರು.
‘ದೇಶದಲ್ಲಿ 50ರಿಂದ 60 ವರ್ಷ ಅನ್ಯಾಯವೇ ನಡೆಯಿತು. ಶಿಕ್ಷಣದ ನೀತಿ ನಿರೂಪಣೆಯಲ್ಲಿ ತೊಡಗಿದ್ದ ಇಂತಹ ದೇಶದ್ರೋಹಿಗಳಿಂದಾಗಿಯೇ ನೈಜ ಇತಿಹಾಸ ಗೊತ್ತಾಗಲಿಲ್ಲ’ ಎಂದು ವಿಷಾದಿಸಿದರು.
‘ಭಾರತದಲ್ಲಿ ಹುಟ್ಟಿದ ಯಾರೂ ದಡ್ಡರಲ್ಲ. ಈ ಬಗ್ಗೆ ಪೋಷಕರು, ಶಿಕ್ಷಕರು ತಿಳಿಸಬೇಕಿದೆ. ಅದರಲ್ಲಿ ಸಫಲತೆ ಸಾಧಿಸಿದರೆ ಯುವಜನತೆ ಬಹಳಷ್ಟು ಸಾಧನೆ ಮಾಡಲು ಸಾಧ್ಯವಿದೆ’ ಎಂದರು.
‘ಅಮೆರಿಕದಲ್ಲಿ ನಡೆಯುವ ಎಲ್ಲಾ ಶಾಲೆಗಳ ಸ್ಪರ್ಧೆಗಳಲ್ಲಿ ಭಾರತೀಯ ಮೂಲದವರೇ ಮುಂಚೂಣಿಯಲ್ಲಿ ಇರುತ್ತಾರೆ. ಭಾರತೀಯರ ರಕ್ತದಲ್ಲೇ ಅಂತಹ ಮೇಧಾಶಕ್ತಿ ಇದೆ. ಜರ್ಮನವರಿಗೆ ತಮ್ಮ ಶಕ್ತಿ, ಸಾಮರ್ಥ್ಯದ ಅರಿವಿತ್ತು. ಹೀಗಾಗಿ, ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣ ನಾಶವಾದ ದೇಶವನ್ನು ಮತ್ತೆ ಮರುನಿರ್ಮಿಸಿದರು. ಇದೇ ರೀತಿ ನಮ್ಮ ನಿಜವಾದ ಗುಣ ಅರಿತು, ಮುನ್ನಡೆಯಬೇಕಿದೆ’ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಪಿ. ವಿವೇಕಾನಂದ ಮಾತನಾಡಿದರು. ಗೋಕಾಕದ ಶಾರದಾ ಶಕ್ತಿಪೀಠದ ಅಧ್ಯಕ್ಷೆ ಮಾತಾಜಿ ಶಿವಮಯಿ, ಶಾರದಾಶ್ರಮದ ಮುಖ್ಯಸ್ಥೆ ಮಾತಾಜಿ ಪ್ರಬೋದಮಯಿ, ಕಿರ್ಲೋಸ್ಕರ್ ಫೆರಸ್ ಸಂಸ್ಥೆಯ ಎಂ.ಡಿ. ರವಿ ಗುಮಾಸ್ತೆ, ಬಿಕೆಜಿ ಸಮೂಹದ ಸಂಸ್ಥಾಪಕ ಬಿ. ನಾಗನಗೌಡ, ಹೋಟೆಲ್ ಉದ್ಯಮಿ ಪಿ.ಡಿ. ಗೌತಮ್, ಸಂಚಾರ ಠಾಣೆ ಇನ್ಸ್ಪೆಕ್ಟರ್ ಹುಲುಗಪ್ಪ ಇದ್ದರು.
ಸಂಜೆ ಶಾರದಾದೇವಿಯವರ ಜಯಂತ್ಯುತ್ಸವ ನಡೆಯಿತು.
ಸಂಸ್ಕೃತಿ ಜೀವನ ಪದ್ಧತಿ ಆಚಾರ ವಿಚಾರಗಳಲ್ಲಿ ವಿದೇಶಿ ಅನುಕರಣೆ ಬೇಡ. ಸಾಮಾನ್ಯ ಜ್ಞಾನ ಸಂಚಾರ ನಿಯಮ ಪಾಲನೆ ಮೊದಲಾದ ವಿಚಾರಗಳಲ್ಲಿ ಅನುಕರಣೆ ಮಾಡಬೇಕಿದೆಸ್ವಾಮಿ ನಿರ್ಭಯಾನಂದಜಿ ಮಹಾರಾಜ್ ಅಧ್ಯಕ್ಷ ಗದಗ–ರಾಮಕೃಷ್ಣ ವಿವೇಕಾನಂದ ಆಶ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.