
ಹೊಸಪೇಟೆ (ವಿಜಯನಗರ): ವಾರಣಾಸಿಯ ಗಂಗಾರತಿಯ ಮಾದರಿಯಲ್ಲಿ ಹಂಪಿಯಲ್ಲಿ ತುಂಗಾರತಿಯ ವೈಭವವನ್ನು ಹತ್ತಾರು ವಿದೇಶಿಯರ ಸಹಿತ ನೂರಾರು ಮಂದಿ ಬುಧವಾರ ರಾತ್ರಿ ನೋಡಿ ಸಂತೋಷಪಟ್ಟರು. ದೀಪದ ಬೆಳಕು ನದಿ ನೀರಲ್ಲಿ ಕುಲುಕಾಟ ಮಾಡುತ್ತಿದ್ದಾಗ ಅಲ್ಲೊಂದು ವಿಶಿಷ್ಟ ಸುಂದರ ಲೋಕವೇ ಸೃಷ್ಟಿಯಾದಂತೆ ಕಾಣಿಸಿತು.
ಹಂಪಿ ಉತ್ಸವಕ್ಕೆ ಪೂರ್ವಭಾವಿಯಾಗಿ ತುಂಗಾರತಿ ಮಾಡುವುದು ಈಚಿನ ವರ್ಷಗಳಲ್ಲಿ ನಡೆಯುತ್ತ ಬಂದಿದ್ದು, ಜನರಿಗೆ ಇದೊಂದು ಬಹಳ ದೊಡ್ಡ ಆಕರ್ಷಣೆಯ ಕೇಂದ್ರವಾಗಿಯೂ ಬದಲಾಗಿದೆ. ಅಂತೆಯೇ ಬುಧವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಜಿಲ್ಲಾಧಿಕಾರಿ ಸಹಿತ ಹಲವು ಮುಖಂಡರ ಜತೆಗೆ ತುಂಗಾರತಿ ನಡೆಸಿದಾಗ ತುಂಗಭದ್ರಾ ಸ್ನಾನಘಟ್ಟ ಗಂಗಾ ತಟದಂತೆಯೇ ಕಾಣಿಸಿತು.
ಅರ್ಚಕರು ಸಾಲಾಗಿ ನಿಂತು, ಮಂತ್ರಘೋಷಗಳ ನಡುವೆ ದೊಡ್ಡದಾದ ಕಂಚಿನ ದೀಪಗಳಿಂದ ನದಿಗೆ ಆರತಿ ಬೆಳಗಿದರು. ನದಿಯ ನೀರಿನಲ್ಲಿ ಪ್ರತಿಫಲಿಸುವ ದೀಪದ ಬೆಳಕು, ಮಂತ್ರಗಳ ಪಠಣ ಮತ್ತು ಶಂಖನಾದವು ಭಕ್ತರಲ್ಲಿ ಹಾಗೂ ಪ್ರವಾಸಿಗರಲ್ಲಿ ಭಕ್ತಿಭಾವ ಮೂಡಿಸಿತು.
ಮಾಜಿ ಶಾಸಕ ಭೀಮಾ ನಾಯ್ಕ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಎಸ್ಪಿ ಎಸ್.ಜಾಹ್ನವಿ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.