ADVERTISEMENT

ಹೂವಿನಹಡಗಲಿ: ಭೂಮಿ ಅಕ್ರಮ ಮಂಜೂರಾತಿ; ಇಬ್ಬರ ಅಮಾನತು

​ಪ್ರಜಾವಾಣಿ ವಾರ್ತೆ
Published 10 ಮೇ 2022, 12:26 IST
Last Updated 10 ಮೇ 2022, 12:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಸರ್ಕಾರಿ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರಾತಿ ಮಾಡಿರುವ ಆರೋಪದ ಅಡಿ ಹಿರೇಹಡಗಲಿಯ ಪ್ರಭಾರ ಕಂದಾಯ ನಿರೀಕ್ಷಕ ಸಿ.ಎಂ.ಕೊಟ್ರೇಶ, ಪ್ರಥಮ ದರ್ಜೆ ಸಹಾಯಕ ಎ.ಎಚ್.ಪುನೀತ್ ಕುಮಾರ್ ಅವರನ್ನು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಅವರು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿದ್ದಾರೆ.

ದಾಸರಹಳ್ಳಿ ಕಂದಾಯ ಗ್ರಾಮದ ಸ.ನಂ. 229/ಡಿ/1 ವಿಸ್ತೀರ್ಣ 10.36 ಎಕರೆ ಸರ್ಕಾರಿ ಭೂಮಿಯನ್ನು ದಾಸರಹಳ್ಳಿಯ ವಿಶಾಲಾಬಾಯಿಗೆ 4.98 ಎಕರೆ, ಗೌರಿಬಾಯಿಗೆ 3.28, ಕೊಟ್ರಿಬಾಯಿಗೆ 2.10 ಎಕರೆ ಭೂಮಿಯನ್ನು ನಿಯಮ ಬಾಹಿರವಾಗಿ ಮಂಜೂರು ಮಾಡಲಾಗಿತ್ತು. ಗ್ರೇಡ್-2 ತಹಶೀಲ್ದಾರ್ ನಟರಾಜ್ ಪ್ರಭಾರದಲ್ಲಿದ್ದಾಗ ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿತ್ತು. ಈ ಕುರಿತು ತನಿಖಾ ತಂಡದ ವರದಿ ಆಧರಿಸಿ ಜಿಲ್ಲಾಧಿಕಾರಿ ಇಬ್ಬರನ್ನು ಅಮಾನತುಗೊಳಿಸಿದ್ದಾರೆ.

ಅನಧಿಕೃತ ಹಕ್ಕು ಬದಲಾವಣೆ ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ದಾಖಲೆ ನಾಶ ಸಾಧ್ಯತೆ ಇರುವುದರಿಂದ ಗ್ರೇಡ್-2 ತಹಶೀಲ್ದಾರ್ ನಟರಾಜ್ ಮತ್ತು ಶಿರಸ್ತೇದಾರ್ ಡಿ.ಮೊಹಮ್ಮದ್ ಗೌಸ್ ಅವರನ್ನು ಇಲ್ಲಿನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಡಿ.ಸಿ ಆದೇಶಿಸಿದ್ದಾರೆ.

ADVERTISEMENT

ಗ್ರೇಡ್-2 ತಹಶೀಲ್ದಾರ್ ವಿರುದ್ಧ ಕ್ರಮ ಜರುಗಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮತ್ತು ಶಿರಸ್ತೇದಾರ್ ವಿರುದ್ಧ ಕ್ರಮಕ್ಕೆ ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.

ಈ ಅಕ್ರಮದಲ್ಲಿ ಭಾಗಿಯಾಗಿರುವ ನಾಲ್ವರ ವಿರುದ್ಧ ಇತ್ತೀಚಿಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.