ಹೊಸಪೇಟೆ (ವಿಜಯನಗರ): ನಗರದ ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಭಾನುವಾರ ಸಂಜೆ ನಡೆದ ರಥೋತ್ಸವದ ವೇಳೆ ತೇರಿನ ಕಲಶ ಕೆಳಗೆ ಬಿದ್ದಿದೆ. ಘಟನೆಯಲ್ಲಿ ವ್ಯಕ್ತಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಂಜೆ ದೇವರಿಗೆ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಸುಮಾರು 50 ಮೀಟರ್ ದೂರ ತೇರು ಚಲಿಸುತ್ತಿದ್ದಂತೆ ಕಲಶ ಅಲುಗಾಡಿ, ಕೆಳಗೆ ವ್ಯಕ್ತಿಯೊಬ್ಬರ ಮೇಲೆ ಉರುಳಿ ಬಿದ್ದಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಬಳಿಕ ಕಲಶವನ್ನು ಮೊದಲಿನಂತೆ ಪ್ರತಿಷ್ಠಾಪಿಸಿ ತೇರು ಎಳೆಯಲಾಯಿತು. ಭಕ್ತರು ಉತ್ತತ್ತಿ, ಬಾಳೆಹಣ್ಣು ತೂರಿ ಹರಕೆ ತೀರಿಸಿದರು. ಬಿಜೆಪಿ ಮುಖಂಡ ಎಚ್.ಆರ್. ಗವಿಯಪ್ಪ ಅವರು ₹1.50 ಲಕ್ಷಕ್ಕೆ ಹರಾಜಿನಲ್ಲಿ ಧ್ವಜ ಪಡೆದರು. ಕಲಶ ಬಿದ್ದದ್ದರಿಂದ ಸುಮಾರು 20ರಿಂದ 25 ನಿಮಿಷ ತೇರು ನಿಂತಲ್ಲಿಯೇ ನಿಂತಿತ್ತು. ಕೋವಿಡ್ನಿಂದ ಎರಡು ವರ್ಷ ಜಾತ್ರೆ ನಡೆದಿರಲಿಲ್ಲ. ಹೊಸ ತೇರಿನ ಮೇಲೆ ಇತ್ತೀಚೆಗೆ ಕಲಶ ಪ್ರತಿಷ್ಠಾಪಿಸಲಾಗಿತ್ತು.
‘ದೇವಸ್ಥಾನಕ್ಕೆ ಹೊಸ ತೇರು ಮಾಡಿಸಲಾಗಿದೆ. ಅದು ಹೈಡ್ರಾಲಿಕ್ ವ್ಯವಸ್ಥೆ ಹೊಂದಿದೆ. ಆದರೆ, ಕೆಲವರು ತೇರು ಚಲಿಸುವಾಗ ಸನ್ನಿ ಹಾಕಿದರು. ಇದರಿಂದ ಕಲಶ ಕೆಳಗೆ ಬಿದ್ದಿದೆ. ವ್ಯಕ್ತಿಯೊಬ್ಬರಿಗೆ ಸಣ್ಣ ಗಾಯಗಳಾಗಿರುವುದು ಬಿಟ್ಟರೆ ಬೇರೇನೂ ಆಗಿಲ್ಲ’ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಅಶ್ವಿನ್ ಕೋತಂಬ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.