ADVERTISEMENT

ಕೂಡ್ಲಿಗಿ | ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಹೆಡ್‌ಕಾನ್‌ಸ್ಟೆಬಲ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 13:18 IST
Last Updated 7 ಆಗಸ್ಟ್ 2025, 13:18 IST
<div class="paragraphs"><p>ಪೊಲೀಸ್ (ಪ್ರಾತಿನಿಧಿಕ ಚಿತ್ರ)</p></div>

ಪೊಲೀಸ್ (ಪ್ರಾತಿನಿಧಿಕ ಚಿತ್ರ)

   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ಬೈಕನ್ನು ದಾಟಿಕೊಂಡು ಮುಂದೆ ಹೋಗುವಾಗ ತನ್ನ ಬೈಕಿಗೆ ಬಸ್ ತಾಕಿದೆ ಎಂಬ ವಿಚಾರವಾಗಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಒಬ್ಬರು ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ಕೊಟ್ಟೂರು ತಾಲ್ಲೂಕಿನ ಗಜಾಪುರ ಬಳಿ ಗುರುವಾರ ನಡೆದಿದೆ.

ಈ ಕುರಿತು ಬಸ್ ಚಾಲಕ ರಾಮಲಿಂಗಪ್ಪ ಅವರು ಕೂಡ್ಲಿಗಿ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ ಮಂಜುನಾಥ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಚಾಲಕನಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯ ವ್ಯಾಪಕವಾಗಿ ಹರಿದಾಡುತ್ತಿದೆ.

ADVERTISEMENT

ಘಟನೆಯ ವಿವರ: ಹರಿಹರ ಘಟಕಕ್ಕೆ ಸೇರಿದ ಬಸ್ ಬಳ್ಳಾರಿಗೆ ಹೋಗುತ್ತಿತ್ತು. ಕೊಟ್ಟೂರಿನಿಂದ ಕೂಡ್ಲಿಗಿ ಬರುವ ರಸ್ತೆಯಲ್ಲಿನ ಮಲ್ಲನಾಯಕಹಳ್ಳಿ ಬಳಿ ಬಂದಾಗ ಬಸ್ ಚಾಲಕ ರಾಮಲಿಂಗಪ್ಪ ಕೂಡ್ಲಿಗಿ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ ಮಂಜುನಾಥ ಹಾಗೂ ಇನ್ನೊಬ್ಬ ಕಾನ್‌ಸ್ಟೆಬಲ್‌ ಇದ್ದ ಬೈಕ್‍ನ್ನು ಹಿಂದಿಕ್ಕಿ ಬಂದಾಗ ಎದುರಿನಿಂದ ಕಾರು ಬಂದಿದ್ದರಿಂದ ಹಿಂಬದಿಯಲ್ಲಿ ಬೈಕಿನ ಹ್ಯಾಂಡಲ್‌ಗೆ ಬಸ್‌ ತಾಕಿತ್ತು ಎನ್ನಲಾಗಿದೆ.

ಬಸ್‌ನ ಕನ್ನಡಿಯಲ್ಲಿ ಬೈಕ್ ಕಾಣಸದೇ ಇದ್ದುದರಿಂದ ಬಸ್ ನಿಲ್ಲಿಸದೆ ಚಾಲಕ ಹಾಗೇ ಮುಂದೆ ಸಾಗಿದ್ದ. ಇದರಿಂದ ಬಸ್ ಹಿಂದೆಯೇ ಬಂದ ಹೆಡ್‌ಕಾನ್‌ಸ್ಟೆಬಲ್‌ ಮಂಜುನಾಥ ಗಜಾಪುರ ಬಳಿ ಬಸ್ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಚಾಲಕನ ಮೇಲೆ ಹಲ್ಲೆ ಮಾಡಿ ಜೇಬಲ್ಲಿದ್ದ ಮೊಬೈಲನ್ನು ಕಿತ್ತುಕೊಂಡು ಠಾಣೆಗೆ ಬರುವಂತೆ ಹೇಳಿ ಬಸ್‍ನಿಂದ ಕೆಳಿಗಿಳಿದಿದ್ದಾರೆ ಎಂದು ದೂರಲಾಗಿದೆ.

ನಂತರ ಬಸ್ ಚಾಲಕ ಬಸ್ಸಿನಿಂದ ಇಳಿದು ಮೊಬೈಲ್ ನೀಡುವಂತೆ ಕೇಳಿಕೊಂಡಿದ್ದರೂ, ಮಂಜುನಾಥ ತನ್ನ ಕೈಯಲ್ಲಿದ್ದ ಹೆಲ್ಮೆಟ್‍ನಿಂದ ಮತ್ತೆ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಹ ಮೊಬೈಲೊಂದರಲ್ಲಿ ಸೆರೆಯಾಗಿತ್ತು ಎಂದು ತಿಳಿಸಲಾಗಿದೆ.

ಘಟನೆಯ ಬಳಿಕ ಕೂಡ್ಲಿಗಿಗೆ ಬಂದ ಬಸ್ ಚಾಲಕ ರಾಮಲಿಂಗಪ್ಪ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಜುನಾಥ ವಿರುದ್ದ ದೂರು ನೀಡಿದ್ದು, ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.