ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪದ ಚಿಲಕನಹಟ್ಟಿ ಎಂಬಲ್ಲಿ ಸೋಮವಾರ ಸಂಜೆ ಹೊಸಪೇಟೆ–ಚಿತ್ರದುರ್ಗ ಹೆದ್ದಾರಿ ದಾಟುತ್ತಿದ್ದ ಚಿರತೆಯೊಂದಕ್ಕೆ ವಾಹನವೊಂದು ಡಿಕ್ಕಿ ಹೊಡೆದುದರಿಂದ ಚಿರತೆ ಸ್ಥಳದಲ್ಲೇ ಸತ್ತಿದೆ.
ಚಿರತೆ ಸತ್ತಿರುವುದನ್ನು ಕಂಡ ಸ್ಥಳೀಯರು ಹಾಗೂ ವಾಹನಗಳಲ್ಲಿ ಸಂಚರಿಸುತ್ತಿದ್ದವರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
‘ನಾವೀಗ ಸ್ಥಳದಲ್ಲೇ ಇದ್ದೇವೆ. ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿರುವ ಶಂಕೆ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಗುತ್ತಿವೆ, ಯಾವ ವಾಹನ ಈ ಚಿರತೆಗೆ ಡಿಕ್ಕಿ ಹೊಡೆಯಿತು ಎಂದು ತಕ್ಷಣಕ್ಕೆ ಅಂದಾಜಿಸಲು ಸಾಧ್ಯವಿಲ್ಲ. ಚಿರತೆಯ ವಯಸ್ಸು, ಇತರ ಮಾಹಿತಿ ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ವಲಯ ಅರಣ್ಯ ಅಧಿಕಾರಿ ಕೌಶಿಕ್ ದಳವಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಸತ್ತಿರುವುದು ಹೆಣ್ಣು ಚಿರತೆ–ಐದು ವರ್ಷ
ಮರಿಯಮ್ಮನಹಳ್ಳಿ ಸಮೀಪದ ಹಾರುವನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಹೆದ್ದಾರಿ ದಾಟುತ್ತಿದ್ದಾಗ ಸತ್ತಿರುವ ಚಿರತೆಗೆ ಐದು ವರ್ಷ ಇರಬಹುದು, ಅದು ಹೆಣ್ಣು ಚಿರತೆಯಾಗಿತ್ತು ಎಂದು ಆರ್ಎಫ್ಒ ಕೌಶಿಕ್ ದಳವಾಯಿ ಹೇಳಿದರು.
ಕಳೆದ ಐದು ವರ್ಷದಲ್ಲಿ ಇದೇ ಹೆದ್ದಾರಿ ಭಾಗದಲ್ಲಿ ವಾಹನಗಳಿಗೆ ಸಿಲುಕಿ ಎರಡು ಚಿರತೆಗಳು ಮತ್ತು ಒಂದು ಕರಡಿ ಸತ್ತಂತಾಗಿದೆ.