ADVERTISEMENT

ವಿಜಯನಗರ: ವರ್ಷದಲ್ಲಿ 200 ದಿನ ಕೆಲಸಕ್ಕೆ ಆಗ್ರಹಿಸಿ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 12:10 IST
Last Updated 20 ಸೆಪ್ಟೆಂಬರ್ 2022, 12:10 IST
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯವರು ಮಂಗಳವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯವರು ಮಂಗಳವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.   

ಹೊಸಪೇಟೆ (ವಿಜಯನಗರ): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದಲ್ಲಿ 200 ದಿನ ಕೆಲಸ ಕೊಡಬೇಕೆಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯವರು ಮಂಗಳವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಪ್ರಮುಖ ಮಾರ್ಗಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಅನಂತರ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವರ್ಷದಲ್ಲಿ ಕನಿಷ್ಠ 200 ದಿನ ಕೆಲಸ ನೀಡಿದರೆ ಅವರಿಗೆ ಸ್ವಲ್ಪಮಟ್ಟಿನ ಸಹಾಯವಾಗುತ್ತದೆ. ಅರ್ಜಿ ಸಲ್ಲಿಸಿದ ತಕ್ಷಣವೇ ಕೆಲಸ ಕೊಡಲು ವ್ಯವಸ್ಥೆ ಮಾಡಬೇಕು. ಕೆಲಸ ನಿರ್ವಹಣೆಗೆ ಸಾಮಗ್ರಿಗಳ ಬಳಕೆ, ದುರಸ್ತಿಗೆ ₹10ರ ಬದಲು ₹20 ನೀಡಬೇಕು. ಗ್ರಾಮೀಣರಿಗೆ ಐದು ಕಿ.ಮೀಗಿಂತ ದೂರದ ಪ್ರದೇಶದಲ್ಲಿ ಕೆಲಸ ಕೊಟ್ಟರೆ ಅದರ ಪ್ರಯಾಣದ ವೆಚ್ಚ ಭರಿಸಬೇಕು. ಕೆಲಸ ಮಾಡಿದ 15 ದಿನದೊಳಗೆ ಕೂಲಿ ಪಾವತಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ರತ್ನಮ್ಮ, ಶಬ್ಬೀರ್‌ ಬಾಷ, ಪಿ. ಅನಿಲ್‌ಕುಮಾರ್‌, ಎಂ. ಶಿಲ್ಪಾ, ಎನ್‌. ಯಶೋಧ, ಪಾರಿಜಾತ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.