ಹೊಸಪೇಟೆ (ವಿಜಯನಗರ): ‘ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಅವರಿಗೆ 1977ರಲ್ಲಿ ಸೋಲುಂಟಾಯಿತು. ಅದೇ ರೀತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ದೇಶಕ್ಕೆ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವ ಬಿಜೆಪಿ/ಎನ್ಡಿಎ ಸರ್ಕಾರವನ್ನು ಸೋಲಿಸಬೇಕಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗಾಗಿ ಮೋದಿ ಸರ್ಕಾರವನ್ನು ಸೋಲಿಸುವ ಅಗತ್ಯ ಎದುರಾಗಿದೆ’ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ (ಸಿಎಫ್ಡಿ) ಸಂಘಟನೆಯ ಅಧ್ಯಕ್ಷರೂ ಆದ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಸರ್ಕಾರದ ಹಗರಣಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸುಪ್ರೀಂ ಕೋರ್ಟ್ ನೇಮಿಸಬೇಕು, ಸರ್ಕಾರ ಬದಲಾದರೆ ಈ ಕೆಲಸ ಆಗಲಿದೆ ಹಾಗೂ ಚುನಾವಣಾ ಬಾಂಡ್ ಸಹಿತ ಹಲವು ಹಗರಣಗಳಲ್ಲಿ ಶಾಮೀಲಾದುದಕ್ಕೆ ಪ್ರಧಾನಿ ಮತ್ತು ಇತರ ಹಲವು ನಾಯಕರು ಜೈಲಿಗೆ ಹೋಗುವುದು ನಿಶ್ಚಿತ‘ ಎಂದರು.
‘ಗಣಿ ಲೂಟಿ ಹಗರಣದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಜತೆಗೆ ಮತ್ತೆ ಸಖ್ಯ ಬೆಳೆಸಿರುವುದು ಬಹಳ ಅಪಾಯಕಾರಿ ನಡೆ. ಇದು ಬಿಜೆಪಿಯ ನಿಜವಾದ ಮುಖವನ್ನು ಪರಿಚಯಿಸುವಂತೆ ಮಾಡಿದೆ. ಮತದಾರರು ಈಗ ಸೂಕ್ತ ನಿರ್ಧಾರ ಕೈಗೊಂಡರೆ ಮಾತ್ರ ಬಿಜೆಪಿಯ ಭ್ರಷ್ಟ ಕೃತ್ಯಗಳನ್ನು ಹತ್ತಿಕ್ಕಲು ಸಾಧ್ಯ’ ಎಂದರು.
ಗಂಡಾಂತರ: ‘ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಬಹುತ್ವ ಸಂಸ್ಕೃತಿಗೆ ಮತ್ತು ದುಡಿಯುವ ವರ್ಗಕ್ಕೆ 1947ರ ನಂತರ ಮೊದಲ ಬಾರಿಗೆ ಗಂಡಾಂತರ ಎದುರಾಗಿದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರೈತರು, ಕೃಷಿ ಕೂಲಿಕಾರರು, ಅಸಂಘಟಿತ ವಲಯದ ಕಾರ್ಮಿಕರು, ಸಂಘಟಿತ ವಲಯದ ಕಾರ್ಮಿಕರೆಲ್ಲ ಭಾರಿ ತೊಂದರೆಗೆ ಸಿಲುಕಿದ್ದರು. ಅವರೇ ಮುಂದೆ ಇಂದಿರಾ ಗಾಂಧಿ ಅವರನ್ನು ಸೋಲಿಸಿದರು. ಇದೀಗ ಮತ್ತೆ ಅಂತಹದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ತೊಂದರೆಗೆ ಒಳಗಾದವರು ಸಂಘಟಿತರಾದರೆ ಪ್ರಧಾನಿ ಮೋದಿ ಅವರನ್ನು ಸೋಲಿಸುವುದು ಸಹ ಕಷ್ಟವಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.