
ಹೊಸಪೇಟೆ (ವಿಜಯನಗರ): ನಮಗೆ ಸಾಧು, ಸನ್ಯಾಸಿಗಳಂತೆ ಜೀವನ ಸಾಗಿಸಲು ಸಾಧ್ಯವಾಗದೆ ಹೋದರೂ, ಉತ್ತಮ ಮನುಷ್ಯರಾಗಿ ಬಾಳ್ವೆ ನಡೆಸಲು ಸಾಧ್ಯವಿದೆ, ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದು ಹರಿದ್ವಾರ ಪತಂಜಲಿ ಯೋಗ ಪೀಠದ ಸಾಧ್ವಿ ದೇವಪ್ರಿಯಾ ದೀದೀಜಿ ಹೇಳಿದರು.
ಇಲ್ಲಿ ಬುಧವಾರ ಕರ್ನಾಟಕ ಪ್ರವಾಸದ ಭಾಗವಾಗಿ 9 ಜಿಲ್ಲೆಗಳ ಯೋಗ ಪ್ರಭಾರಿಗಳು, ಪ್ರಮುಖ ಕಾರ್ಯಕರ್ತರೊಂದಿಗೆ ಮಹಾ ಸತ್ಸಂಗದಲ್ಲಿ ಮಾತನಾಡಿದ ಅವರು, ಏನನ್ನೂ ಚಿಂತನೆ ಮಾಡದೆ ಜೀವನ ನಡೆಸಿ ಪಶುಗಳಂತೆ ಬದುಕಲೇಬಾರದು. ಇನ್ನೊಬ್ಬರತ್ತ ಮಾನವೀಯತೆ ತೋರುವುದರಿಂದಲೇ ನಾವು ಮನುಷ್ಯರಾಗಿ ಬದುಕಲು ಸಾಧ್ಯವಿದೆ. ನಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು, ಸ್ವದೇಶಿ ಚಿಂತನೆ ನಡೆಸಿದರೂ ನಾವು ಬಹುದೊಡ್ಡ ದೇಶಸೇವೆ ಮಾಡಿದಂತೆಯೇ ಆಗುತ್ತದೆ ಎಂದರು.
ನಾವು ಅನುಕರಣೆ ಮಾಡುತ್ತೇವೆಯೇ ಹೊರತು ಮಾತು ಕೇಳುವುದಿಲ್ಲ ಎಂಬುದಕ್ಕೆ ಸಣ್ಣ ನಿದರ್ಶನ ಮಾಡಿ ತೋರಿಸಿದ ಅವರು, ಮಕ್ಕಳು ಸಹ ನಮ್ಮ ಮಾತನ್ನು ಕೇಳುವ ಬದಲಿಗೆ ನಾವು ಮಾಡಿದ್ದನ್ನೇ ಅನುಕರಿಸಲು ಹೋಗುತ್ತಾರೆ, ಹೀಗಾಗಿ ನಮ್ಮ ಮಾತು, ನಡವಳಿಕೆಯನ್ನು ಮಕ್ಕಳು ಅನುಕರಿಸುತ್ತಾರೆ ಎಂಬ ಎಚ್ಚರ ಸದಾ ಇರಬೇಕು ಎಂದು ಕಿವಿಮಾತು ಹೇಳಿದರು.
ಯೋಗ ಪೀಠದ ದಕ್ಷಿಣ ಭಾರತ ಪ್ರಭಾರಿ ಸ್ವಾಮಿ ಪರಮಾರ್ಥ ದೇವ ಜೀ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಪ್ರಯತ್ನಿಸಬೇಕು, ಸ್ವದೇಶಿ ಚಿಂತನೆ ನಮ್ಮ ಉಸಿರಾಗಬೇಕು ಎಂದರು.
ಇದಕ್ಕೆ ಮೊದಲು ಬಾಬಾ ರಾಮದೇವ್ ಗುರೂಜಿ ಅವರು ಹರಿದ್ವಾರದಿಂದ ವಿಡಿಯೊ ಕಾನ್ಫೆರೆನ್ಸ್ ಮೂಲಕ ಸುಮಾರು 40 ನಿಮಿಷಗಳ ಕಾಲ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ಜತೆಗಿನ ಪತಂಜಲಿ ಪಯಣವನ್ನು ಅವರು ಬಹುವಾಗಿ ಮೆಲುಕು ಹಾಕಿದರು. ನಮ್ಮ ಎಲ್ಲ ಆಚರಣೆಗಳ ಹಿಂದೆ ವೈಜ್ಞಾನಿಕ ತಳಹದಿ ಇದೆ, ಅದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಹರಿದ್ವಾರಕ್ಕೆ ಬಂದರೆ ಎಲ್ಲಾ ಸಂಶಯಗಳಿಗೂ ವೈಜ್ಞಾನಿಕವಾಗಿಯೇ ಪರಿಹಾರ ಸಿಗುತ್ತದೆ ಎಂದರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಉಸ್ತುವಾರಿ ಭವರ್ಲಾಲ್ ಆರ್ಯ, ರಾಜ್ಯ ಸಮಿತಿ ಸದಸ್ಯರಾದ ಡಾ.ಎಸ್.ಬಿ.ಹಂದ್ರಾಳ, ಸಂಜಯ ಕುಸ್ತಿಗಾರ್, ಶರಣಪ್ಪ, ಶಿವಾನಂದ ಸಾಲಿಮಠ್, ಬಾಲಚಂದ್ರ ಶರ್ಮಾ, ರಾಜ್ಯ ಮಹಿಳಾ ಪ್ರಭಾರಿ ಶ್ರೀದೇವಿ, ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಶ್ರೀಪಾದ್ ಭೂಪಾಳ್, ಶ್ರೀಲಕ್ಷ್ಮಿ, ಪ್ರೊ.ಎಫ್.ಟಿ.ಹಳ್ಳಿಕೇರಿ, ವೀರೇಶ್, ಅನಂತ ಜೋಶಿ, ಉಮಾ ವಿಶ್ವನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.