ಹೊಸಪೇಟೆ (ವಿಜಯನಗರ): ಪೊಲೀಸ್ ಇಲಾಖೆಯವರು ಕಿರಾಣ ಮರ್ಚಂಟ್ ಅಸೋಸಿಯೇಷನ್ನವರೊಂದಿಗೆ ಮಾತುಕತೆ ನಡೆಸಿ, ಅವರ ಮನವೊಲಿಸಿದ ಕಾರಣ ಬುಧವಾರ ನಗರದಲ್ಲಿ ದಿನಸಿ ಅಂಗಡಿಗಳು ಬಾಗಿಲು ತೆರೆದು ವಹಿವಾಟು ನಡೆಸಿದವು.
‘ತೆರೆಯದ ದಿನಸಿ ಮಳಿಗೆ; ಜನ ಪರದಾಟ’ ಶೀರ್ಷಿಕೆ ಅಡಿ ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಪೊಲೀಸರು ಅನಗತ್ಯವಾಗಿ ಕಿರಿಕಿರಿ ನೀಡಿ, ದಂಡ ಹಾಕುತ್ತಿರುವುದರಿಂದ ಕೋವಿಡ್–19 ನಿಷೇಧಾಜ್ಞೆ ಮುಗಿಯುವವರೆಗೆ ಮಳಿಗೆ ಬಾಗಿಲು ತೆರೆಯದಿರಲು ಕಿರಾಣ ಮರ್ಚಂಟ್ ಅಸೋಸಿಯೇಷನ್ನವರು ನಿರ್ಧರಿಸಿ, ಮಂಗಳವಾರ ನಗರದಲ್ಲಿ ಅಂಗಡಿಗಳನ್ನು ತೆರೆದಿರಲಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗಿತ್ತು.
‘ಡಿವೈಎಸ್ಪಿ ವಿ. ರಘುಕುಮಾರ ಅವರು ನಮ್ಮ ಅಸೋಸಿಯೇಷನ್ನವರನ್ನು ಅವರ ಕಚೇರಿಗೆ ಕರೆಸಿಕೊಂಡು, ಪೊಲೀಸ್ ಇಲಾಖೆಯ ಯಾವುದೇ ಅಧಿಕಾರಿ, ಸಿಬ್ಬಂದಿಯಿಂದ ಕಿರುಕುಳ ಆಗದಂತೆ ಕ್ರಮ ವಹಿಸಲಾಗಿದೆ. ನಿಗದಿತ ಅವಧಿಯೊಳಗೆ ಅಂಗಡಿಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿಗೆ ಓಗೊಟ್ಟು ಬುಧವಾರ ಮಳಿಗೆಗಳನ್ನು ತೆರೆಯಲಾಗಿದೆ’ ಎಂದು ಅಸೋಸಿಯೇಷನ್ ಕಾರ್ಯದರ್ಶಿ ನಾಗರಾಜ ಮುಗದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಮಳಿಗೆ ಮಾಲೀಕರಿಗೆ ಅನಗತ್ಯವಾಗಿ ಯಾರೂ ತೊಂದರೆ ಉಂಟು ಮಾಡಬಾರದು ಎಂದು ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಸೂಚನೆ ಕೊಟ್ಟಿರುವೆ’ ಎಂದು ಡಿವೈಎಸ್ಪಿ ವಿ. ರಘುಕುಮಾರ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.