ADVERTISEMENT

ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆ: ‘ಪ್ರಜಾವಾಣಿ’ ಕೊಡುಗೆ ಅನನ್ಯ- ಶರಣಮ್ಮ

‘ಪ್ರಜಾವಾಣಿ’ ಅಮೃತ ಮಹೋತ್ಸವ; ಹೂವಿನಹಡಗಲಿಯಲ್ಲಿ ಮತದಾನ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 13:07 IST
Last Updated 25 ಫೆಬ್ರುವರಿ 2023, 13:07 IST
‘ಪ್ರಜಾವಾಣಿ’ ಅಮೃತ ಮಹೋತ್ಸವ; ಹೂವಿನಹಡಗಲಿಯಲ್ಲಿ ಮತದಾನ ಜಾಗೃತಿ ಜಾಥಾ
‘ಪ್ರಜಾವಾಣಿ’ ಅಮೃತ ಮಹೋತ್ಸವ; ಹೂವಿನಹಡಗಲಿಯಲ್ಲಿ ಮತದಾನ ಜಾಗೃತಿ ಜಾಥಾ   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ‘ಪ್ರಜಾವಾಣಿ’ ಅಮೃತ ಮಹೋತ್ಸವ ಅಂಗವಾಗಿ ಪ್ರಜಾವಾಣಿ, ತಾಲ್ಲೂಕು ಆಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತುಂಗಭದ್ರಾ ವಿದ್ಯಾಸಂಸ್ಥೆ ಸಹಯೋಗದಲ್ಲಿ ಪಟ್ಟಣದಲ್ಲಿ ಶನಿವಾರ ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ತುಂಗಭದ್ರಾ ಪ್ರೌಢಶಾಲೆಯಿಂದ ಆರಂಭವಾದ ಜಾಥಾ, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ, ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದ ಮೂಲಕ ಸಾಗಿ ಮೂಲ ಸ್ಥಳದಲ್ಲಿ ಸಂಪನ್ನಗೊಂಡಿತು.

ಇದಕ್ಕೂ ಮುನ್ನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್‌ ಕೆ. ಶರಣಮ್ಮ, ‘ಜನರ ನೈಜ ಧ್ವನಿಯಾಗಿರುವ ‘ಪ್ರಜಾವಾಣಿ’ ಪತ್ರಿಕೆ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಅನನ್ಯ ಕೊಡುಗೆ ನೀಡಿದೆ. ವಿಶಿಷ್ಟ ಹಾಗೂ ವಸ್ತುನಿಷ್ಠ ಬರಹಗಳ ಮೂಲಕ ‘ಪ್ರಜಾವಾಣಿ’ ಜನರ ವಿಶ್ವಾಸ ಗಳಿಸಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಪ್ರತಿಯೊಬ್ಬರಿಗೂ ಪತ್ರಿಕೆ ಓದು ಸಹಕಾರಿಯಾಗುತ್ತದೆ. ಜನಮುಖಿಯಾಗಿರುವ ಈ ಪತ್ರಿಕೆ ಇನ್ನೂ ಎತ್ತರಕ್ಕೇರಲಿ ಎಂದು ಆಶಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್ ಎನ್.ಹಳ್ಳಿಗುಡಿ ಮಾತನಾಡಿ, ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿ ‘ಪ್ರಜಾವಾಣಿ’ ಬಳಗದಿಂದ ಮತದಾನ ಜಾಗೃತಿ ಹಮ್ಮಿಕೊಂಡಿರುವುದು ಶ್ಲಾಘನೀಯ. ನೊಂದವರ, ಶೋಷಿತರ, ದಮನಿತರ ಧ್ವನಿಯಾಗಿರುವ ಕಾರಣ ಪತ್ರಿಕೆ ಸುದೀರ್ಘ ಕಾಲ ಜೀವಂತಿಕೆ ಉಳಿಸಿಕೊಂಡಿದೆ. ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ಜನತಂತ್ರವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಹಿರಿಯ ಜಿಲ್ಲಾ ವರದಿಗಾರ ಶಶಿಕಾಂತ ಶೆಂಬೆಳ್ಳಿ ಮಾತನಾಡಿ, ಪ್ರಜಾವಾಣಿ ಅಮೃತ ಮಹೋತ್ಸವ ಪ್ರಯುಕ್ತ ಇಡೀ ವರ್ಷ ಜನರಿಗೆ ಸಹಕಾರಿಯಾಗುವಂಥ ಕಾರ್ಯಕ್ರಮ ನಡೆಸುತ್ತಿದ್ದೇವೆ. ವಿಶ್ವಾಸಾರ್ಹತೆ, ವೃತ್ತಿಪರತೆಯೊಂದಿಗೆ ತನ್ನ ಅಸ್ಮಿತೆ, ಅನನ್ಯತೆ ಉಳಿಸಿಕೊಂಡಿರುವ ಪ್ರಜಾವಾಣಿ ಸುದೀರ್ಘ ಕಾಲ ಜನರ ನಡುವೆ ಉಳಿಯಲು ಓದುಗರೇ ಕಾರಣ. ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾದಾಗಲೆಲ್ಲ ಪ್ರಜಾವಾಣಿ ಜನಧ್ವನಿಯಾಗಿ ಕೆಲಸ ಮಾಡಿದೆ. ಗೋಕಾಕ್ ಚಳವಳಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸತ್ವಯುತ ಬರಹಗಳೊಂದಿಗೆ ಜನಪರ ಹೋರಾಟಗಳಿಗೆ ಶಕ್ತಿ ತುಂಬಿದೆ ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಹನುಮಂತಪ್ಪ, ತುಂಗಭದ್ರಾ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ನಿರ್ದೇಶಕ ಗುರುವಿನ ರಾಜು, ಸಿ.ಆರ್.ಪಿ. ಚನ್ನವೀರನಗೌಡ, ತುಂಗಭದ್ರಾ ಪ್ರೌಢಶಾಲೆ ಮುಖ್ಯಶಿಕ್ಷಕ ಸುರೇಶ ಅಂಗಡಿ, ಶಿಕ್ಷಕರಾದ ಎಸ್.ದ್ವಾರಕೀಶ ರೆಡ್ಡಿ, ಆರ್.ಸ್ವಾಮಿನಾಥ, ಜಿ.ಆನಂದ, ಹೂವಿನಹಡಗಲಿ ‘ಪ್ರಜಾವಾಣಿ’ ವರದಿಗಾರ ಕೆ. ಸೋಮಶೇಖರ್‌, ಛಾಯಾಗ್ರಾಹಕ ಲವ, ಪತ್ರಕರ್ತರಾದ ಎಸ್.ಅಶ್ವಥನಾರಾಯಣ, ವಿಶ್ವನಾಥ ಹಳ್ಳಿಗುಡಿ, ಎಂ.ನಿಂಗಪ್ಪ, ಎಲ್.ಅಕ್ಬರ್, ಎಸ್.ಎಂ.ಬಸವರಾಜ, ಮಧುಸೂದನ, ಎಸ್.ಎಂ.ಜಾನ್, ಎಂ.ಜಗದೀಶ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಮಲ್ಕಿ ಒಡೆಯರ್ ಪಾಲ್ಗೊಂಡಿದ್ದರು. ವರ್ತಕರಾದ ಭರತ್‌ಕುಮಾರ್ ಚವ್ಹಾಣ್‌ ಮತ್ತು ಎನ್‌.ಎಸ್‌.ಜಗದೀಶಗೌಡ ಅವರು ‘ಪ್ರಜಾವಾಣಿ’ 75 ಬರಹವುಳ್ಳ ಟೋಪಿಗಳನ್ನು ವಿತರಿಸಿದರು.

‘ಮತ ಮಾರಿಕೊಳ್ಳದಿರಿ’
‘ನಿಮ್ಮ ಮತ ಅಮೂಲ್ಯವಾದುದು, ಅದನ್ನು ಮಾರಿಕೊಳ್ಳದಿರಿ’, ‘ಮತ ಹಾಕಿ ಪ್ರಜಾಪ್ರಭುತ್ವ ಉಳಿಸಿ’, ‘ನಮ್ಮ ಹಕ್ಕು ನಮ್ಮ ಮತ’ ಎಂದು ವಿದ್ಯಾರ್ಥಿಗಳು ಜಾಥಾದಲ್ಲಿ ಘೋಷಣೆಗಳನ್ನು ಹಾಕಿದರು. ತುಂಗಭದ್ರಾ ಪ್ರೌಢಶಾಲೆಯ ಡಾ. ಬಿ.ಆರ್. ಅಂಬೇಡ್ಕರ್ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ವಿದ್ಯಾರ್ಥಿಗಳು ಭಿತ್ತಿಪತ್ರಗಳನ್ನು ಹಿಡಿದು, ಮತದಾರರ ಜಾಗೃತಿ ಘೋಷಣೆಗಳನ್ನು ಕೂಗುತ್ತ ಜಾಗೃತಿ ಮೂಡಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ
‘ಎಸ್ಸೆಸ್ಸೆಲ್ಸಿ, ಪಿಯುಸಿ ಪಠ್ಯಕ್ರಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪ್ರಜಾವಾಣಿ ಉಪಯುಕ್ತ ಮಾಹಿತಿ ನೀಡುತ್ತಿದೆ. ಭಾನುವಾರದ ಸಂಚಿಕೆಯಲ್ಲಿ ‘ಮಜಕೂರ’ ಗಣಿತ ರಸಪ್ರಶ್ನೆ ಸೇರಿದಂತೆ ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾಗಿ ಮಾಹಿತಿ ನೀಡುತ್ತಿದೆ‘ ತುಂಗಭದ್ರಾ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮಾಗಳದ ಮಮತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.