
ಹೊಸಪೇಟೆ (ವಿಜಯನಗರ): ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಒಂಟಿ ಮಹಿಳೆಯರ ಪುನರ್ವಸತಿ ಹಾಗೂ ಸಂರಕ್ಷಣೆಗೆ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘ ಒತ್ತಾಯಿಸಿದೆ.
ಸಂಘದ ರಾಜ್ಯ ಸಂಚಾಲಕಿ ಮಾಳಮ್ಮ, ಗೌರವ ಸಲಹೆಗಾರ ಯು.ಬಸವರಾಜ ಅವರ ನೇತೃತ್ವದಲ್ಲಿ ಗುರುವಾರ ಇಲ್ಲಿ ನಡೆದ ಸಮಾವೇಶದ ಕೊನೆಯಲ್ಲಿ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಮೂಲಕ ಕಳುಹಿಸಿಕೊಡಲಾಯಿತು.
ಹಕ್ಕೊತ್ತಾಯಗಳು: ದೇವದಾಸಿಯೇತರ, ಒಂಟಿ ಮಹಿಳೆಯರ ಗಣತಿ ಮಾಡಿ, ದೇವದಾಸಿ ಪುನರ್ವಸತಿ ಮಾದರಿಯಲ್ಲಿ ಪರಿಣಾಮಕಾರಿ ಪುನರ್ವಸತಿಗೆ ಕ್ರಮವಹಿಸಬೇಕು. ಒಂಟಿ ಮಹಿಳೆಯರಿಗೆ ಮಾಸಿಕ ಸಹಾಯಧನ/ ಪಿಂಚಣಿ ಕನಿಷ್ಠ ₹6000 ನೀಡಬೇಕು, ಒಂಟಿ ಮಹಿಳೆಯರು, ಗಂಡ ಬಿಟ್ಟ ಹಾಗೂ ಸತ್ತ ಯುವತಿಯರು ಹಾಗೂ 50 ವರ್ಷದೊಳಗಿನ ಮಹಿಳೆಯರ ಸಾಮಾಜಿಕ ಬಹಿಷ್ಕಾರಕ್ಕೆ ಪರಿಹಾರವಾಗಿ ₹10 ಲಕ್ಷ ಇಡುಗಂಟು ಘೋಷಿಸಬೇಕು. ಅಂತಹ ಬಹಿಷ್ಕೃತರನ್ನು ಮರು ವಿವಾಹವಾಗಲು ಮುಂದೆ ಬರುವ ಪುರುಷರಿಗೆ ಪ್ರೋತ್ಸಾಹಧನ ನೀಡಬೇಕು. ವಿದ್ಯಾವಂತ ಮಹಿಳೆಗೆ ಉದ್ಯೋಗ ಒದಗಿಸಿ ಇಲ್ಲವೆ ನಿರುದ್ಯೋಗ ಭತ್ಯೆ ಮಾಸಿಕ ₹10,000 ಒದಗಿಸಿ ಎಂದು ಒತ್ತಾಯಿಸಲಾಗಿದೆ.
ದೌರ್ಜನ್ಯಕ್ಕೊಳಗಾಗಿ ಗರ್ಭಿಣಿ ಹಾಗೂ ಬಾಣಂತಿಯರಾದ ಒಂಟಿ ಮಹಿಳೆಯರಿಗೆ ಕನಿಷ್ಠ 18 ತಿಂಗಳ ಕಾಲ ಮಾಸಿಕ ₹10 ಸಾವಿರ ವಿಶೇಷ ನೆರವು ಹಾಗೂ ವೈದ್ಯಕೀಯ ರಕ್ಷಣೆ ಒದಗಿಸಬೇಕು, ಒಂಟಿ ಮಹಿಳೆಯರು, ಗಂಡ ಸತ್ತ ಹಾಗೂ ಬಿಟ್ಟ ಮಹಿಳೆಯರ ಹಾಗೂ ಅವರ ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನು ರಚಿಸಬೇಕು, ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅಗತ್ಯ ನೆರವು ನೀಡಬೇಕು, ಒಂಟಿ ಮಹಿಳೆಯರ ಸಾಮಾಜಿಕ ಬಹಿಷ್ಕಾರ ನಿರ್ಬಂಧ ಕಾಯ್ದೆ ಹಾಗೂ ಅವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ರೂಪಿಸಬೇಕು ಎಂದು ಸಹ ಆಗ್ರಹಿಸಲಾಗಿದೆ.
ಮಹೇಶ ಪತ್ತಾರ, ಸವಿತಾ ಪಾಟೀಲ, ಮಂಜುಳಾ ಪವಾರ, ಸುಜಾತಾ ಬೇಸ್ತರ, ಸಂಗೀತಾ ಗೌಡ, ಗುರು ಶಾಂತಮ್ಮ, ಪಿ. ಚಾಂದ.ಬಿ, ಹುಲಿಗೆಮ್ಮ, ಪ್ರೇಮ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.