
ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯಲ್ಲಿ ಶನಿವಾರ ನಡೆದ ಒನಕೆ ಓಬವ್ವ ಉತ್ಸವದಲ್ಲಿ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸನ್ಮಾನಿಸಿದರು
ಕೂಡ್ಲಿಗಿ: ತಾಲ್ಲೂಕಿನ ಗುಡೇಕೋಟೆಯಲ್ಲಿ ಶನಿವಾರ ನಡೆದ ಒನಕೆ ಓಬವ್ವ ಉತ್ಸವದಲ್ಲಿ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರು ವೈವಿಧ್ಯಮಯ ಚಿತ್ರ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷರನ್ನು ರಂಜಿಸಿದರು.
ಗಾಯಕಿ ಮಾನಸ ಹೊಳ್ಳ ವಿವಿಧ ಗೀತೆಗಳನ್ನು ಹಾಡಿದರು. ಹಾಸ್ಯ ಕಲಾವಿದ ಅಪ್ಪಣ್ಣ ಮತ್ತು ಸಂಗಡಿಗರು ಹಾಸ್ಯ ಪ್ರಸಂಗವೊಂದನ್ನು ಪ್ರಸ್ತುತ ಪಡಿಸಿ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಬೆಂಗಳೂರಿನ ಸ್ಲುಜೋಶ್ ತಂಡದವರು ಕಾಂತಾರ ಚಿತ್ರದ ‘ವರಾಹ ರೂಪಂ’ ಗೀತೆಗೆ ನೃತ್ಯ ಮಾಡಿದರು.
ಇದಕ್ಕೂ ಮೊದಲು ಬ್ಯಾಲಾಳ್ ಶ್ರೀ ಪಂಡಿತ ಪುಟ್ಟರಾಜ ಸಂಗೀತ ಸೇವಾ ಟ್ರಸ್ಟ್ನ ಕಲಾವಿದರಿಂದ ಜನಪದ ಸಂಗೀತ, ಎಸ್.ಎಸ್. ವಿರುಪಾಕ್ಷಪ್ಪ ಅವರಿಂದ ಏಕಾಪತ್ರ ಅಭಿನಯ, ಸಿ. ಮಾರಪ್ಪ ಮತ್ತು ತಂಡದಿಂದ ಒಡಪು ಹೇಳುವುದು, ವಿವಿಧ ಸ್ಥಳೀಯ ಕಲಾವಿದರು ತಮ್ಮ ಹಾಡುಗಾರಿಕೆ, ನೃತ್ಯ, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಗುರುಕಿರಣ್ ಗಾಯನಕ್ಕೆ ಹುಚ್ಚೆದ್ದು ಕುಣಿದ ಜನ: ಉತ್ಸವ ಭಾನುವಾರ ರಾತ್ರಿ ಗಾಯಕ ಗುರುಕಿರಣ್ ಅವರ ಹಾಡುಗಳ ಅಮೋಘ ಪ್ರದರ್ಶನದೊಂದಿಗೆ ಸಮಾರೋಪಗೊಂಡಿತು.
‘ಅವ್ವ ಕಣೋ ಕನ್ನಡ, ನನ್ನ ಜೀವ ಕಣೋ’ ಹಾಡು ಹಾಡುತ್ತಿದ್ದಂತೆ ವೇದಿಕೆಮುಂಭಾಗದಲ್ಲಿದ್ದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಸೇರಿ ಗಣ್ಯರು ಹಾಗೂ ಪ್ರೇಕ್ಷಕರು ಹೆಜ್ಜೆ ಹಾಕಿದರು. ಇವರೊಂದಿಗೆ ಗಾಯಕರಾದ ಗಣೇಶ್ ಕಾರಂತ್, ಚೈತ್ರಾ, ಬಾನು ಅವರು ಕೂಡಮೋಡಿ ಮಾಡಿದರು. ಹಾಸ್ಯ ಕಲಾವಿದರಾದ ಸುಶ್ಮಿತಾ ಜಗ್ಗಪ್ಪ ತಂಡದ ಹಾಸ್ಯಪ್ರಸಂಗ ನರೆದವರನ್ನು ರಂಜಿಸಿತು. ಸಂಜೆ ಸ್ಥಳೀಯ ನೂರಾರು ಕಲಾವಿದರು ಸಂಗೀತ, ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನೃತ್ಯ, ಕಿರು ನಾಟಕ ಪ್ರದರ್ಶಿಸಿದರು. ಸಮಯದ ಅಭಾವದಿಂದ ಅನೇಕ ತಂಡಗಳಿಗೆ ಕೇವಲ ಎರಡು 3 ನಿಮಿಷ ಮಾತ್ರ ಕಾಲಾವಕಾಶ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.