ಹೊಸಪೇಟೆ(ವಿಜಯನಗರ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೂ ಇಲ್ಲಿನ ಆರೋಗ್ಯ ಇಲಾಖೆಯವರು ಕೋವಿಡ್ ದೃಢಪಟ್ಟ ಗರ್ಭಿಣಿಯರಿಗೆ ಯಾವುದೇ ಕೊರತೆ ಆಗದಂತೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಎರಡನೇ ಅಲೆ ಆರಂಭವಾದ ದಿನದಿಂದ ಇದುವರೆಗೆ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ 27 ಜನರ ಹೆರಿಗೆ ಮಾಡಲಾಗಿದೆ. ಎಲ್ಲರಿಗೂ ಕೋವಿಡ್ ದೃಢಪಟ್ಟಿತ್ತು. ಈ ಪೈಕಿ 14 ಮಹಿಳೆಯರಿಗೆ ಸಹಜ, 13 ಜನರಿಗೆ ಸಿಸೇರಿಯನ್ ಮಾಡಲಾಗಿದೆ. ಜನಿಸಿದ ಎಲ್ಲ 27 ಮಕ್ಕಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ನೂರು ಹಾಸಿಗೆ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಪ್ರಿಯಾಂಕಾ, ಮಕ್ಕಳ ತಜ್ಞೆ ಡಾ.ಶ್ರೀನಿವಾಸ ಅವರ ಕಾಳಜಿಯಿಂದಾಗಿ ಈವರೆಗೆ ಯಾವುದೇ ಶಿಶುವಿಗೂ ಸೋಂಕು ತಗುಲಿಲ್ಲ. ತಾಯಂದಿರು, ಶಿಶುಗಳು ಆರೋಗ್ಯವಾಗಿದ್ದಾರೆ. ‘ಆಸ್ಪತ್ರೆಯಲ್ಲಿ ಸ್ವಚ್ಛತೆ ಸೇರಿದಂತೆ ಇತರೆ ಸುರಕ್ಷತಾ ಕ್ರಮಗಳಿಂದಾಗಿ ತಾಯಂದಿರಿಂದ ಮಕ್ಕಳಿಗೆ ಸೋಂಕು ಹರಡಿಲ್ಲ. ಸೋಂಕು ದೃಢಪಟ್ಟ ತಾಯಂದಿರು ಕೂಡ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ’ ಎಂದು ವೈದ್ಯರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.