
ಹೊಸಪೇಟೆ (ವಿಜಯನಗರ): ಸಕ್ಕರೆ ಕಾರ್ಖಾನೆಗಳು ಜಿಲ್ಲೆಯ ಕಬ್ಬು ಬೆಳೆಗಾರರಿಂದ ಖರೀದಿಸುವ ಕಬ್ಬಿಗೆ ದರ ನಿಗದಿ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ಸಭೆ ನಡೆದಿದ್ದು, ರಾತ್ರಿಯೊಳಗೆ ಪರಿಷ್ಕೃತ ದರ ಸೂತ್ರದೊಂದಿಗೆ ತಮಗೆ ತಿಳಿಸುವಂತೆ ಕಂಪನಿಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.
ಡಿ.ಸಿ ಅವರ ಈ ಸೂಚನೆಗೆ ಕಂಪನಿಗಳ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದು, ತಕ್ಷಣ ಮಾಹಿತಿ ನೀಡುವುದಾಗಿ ಹೇಳಿದರು. ಹೀಗಾಗಿ ಬಹುತೇಕ ಮಂಗಳವಾರವೇ ಕಬ್ಬಿನ ದರವನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸುವ ಸಾಧ್ಯತೆ ದಟ್ಟವಾಗಿದೆ.
ಕಮಲಾಪುರ ಭಾಗದಲ್ಲಿ ಕಂಪನಿಗಳು ರೈತರನ್ನು ಒಡೆದು ಆಳುವ ನೀತಿಯಂತೆ ಕಬ್ಬು ಖರೀದಿಸಲು ಮುಂದಾಗಿದ್ದರು. ಇದಕ್ಕೆ ಹೊಸಪೇಟೆ ರೈತ ಸಂಘದ ಮುಖಂಡರು ಆಕ್ಷೇಪ ಎತ್ತಿದ ಕಾರಣ ಶಾಸಕ ಎಚ್.ಆರ್.ಗವಿಯಪ್ಪ ಅವರು ಇಂದಿನ ಈ ಸಭೆ ನಿಗದಿಪಡಿಸಿದ್ದರು. ಬೆಂಗಳೂರಿಗೆ ಬರಲು ಅವರಿಗೆ ಪಕ್ಷದ ವತಿಯಿಂದ ತುರ್ತು ಕರೆ ಬಂದ ಕಾರಣ ಅವರು ಸಭೆಯಲ್ಲಿ ಹಾಜರಿರಲಿಲ್ಲ. ಆದರೆ ಜಿಲ್ಲಾಧಿಕಾರಿ ಅವರು ರೈತರ ಭಾವನೆಗೆ ಸ್ಪಂದಿಸಿ, ಕಾರ್ಖಾನೆಗಳ ಒಡೆದು ಆಳುವ ನೀತಿಯನ್ನು ಬಹಿರಂಗವಾಗಿಯೇ ಖಂಡಿಸಿದರು.
‘ರೈತರು ಟನ್ ಕಬ್ಬಿಗೆ ₹3,200 ಕೇಳುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಕಂಪನಿ ಮಾಲೀಕರೊಂದಿಗೆ ಮಾತನಾಡಿ, ಸೋಮವಾರ ರಾತ್ರಿಯೊಳಗೆಯೇ ನನಗೆ ಕಬ್ಬಿನ ದರದ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು. ಇದಕ್ಕೆ ಸ್ಪಂದಿಸದಿದ್ದರೆ ಕಬ್ಬು ತುಂಬಿದ ಲಾರಿಗಳ ಸಂಚಾರವನ್ನು ತಡೆಯುವುದು ಅನಿವಾರ್ಯವಾಗಲಿದೆ’ ಎಂದು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದರು. ಬಳಿಕ ಪ್ರತಿನಿಧಿಗಳು ಇದಕ್ಕೆ ಒಪ್ಪಿದರು.
ಇದಕ್ಕೆ ಮೊದಲು ಸಿರುಗುಪ್ಪ ಎನ್ಎಸ್ಎಲ್ ಶುಗರ್ಸ್ ತುಂಗಭದ್ರಾ ಕಂಪನಿಯ ಪ್ರತಿನಿಧಿ ಜಾಗೀರ್ದಾರ್ ಮಾತನಾಡಿ, ತಮ್ಮ ಕಂಪನಿಗೆ ಕಟಾವು, ಸಾಗಣೆ ವೆಚ್ಚ ಅಧಿಕವಾಗುತ್ತಿದೆ, ಎರಡು ವರ್ಷದಿಂದ ನಷ್ಟದಲ್ಲಿದೆ ಎಂದರು. ಆಗ ರೈತ ಮುಖಂಡರು, ಕಂಪನಿಯ ಇತರ ಉತ್ಪನ್ನಗಳಿಂದ ಬರುವ ಲಾಭದ ಬಗ್ಗೆ ಏಕೆ ಹೇಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಡಿ.ಸಿ ಅವರು ಎಲ್ಲರನ್ನೂ ಸಮಾಧಾನಪಡಿಸಿದರು.
ಹೊಸಪೇಟೆ ರೈತ ಸಂಘದ ಮುಖಂಡರಾದ ಕಟಗಿ ಜಂಬಯ್ಯ ನಾಯಕ, ಕಟಗಿ ರಾಮಕೃಷ್ಣ, ನಾಯಕರ ವೆಂಕೋಬಪ್ಪ, ಹುಲುಗಪ್ಪ, ಜಾಕೀರ್, ಕಮಲಾಪುರದ ಸಮೀವುಲ್ಲಾ, ಪ್ರಶಾಂತ್ ಸಿಂಗ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.